ಶಿವಮೊಗ್ಗ: ಕೇರಳದ ವಯನಾಡಿಗೆ (Wayanad) ನೂರು ಮನೆ ಕಟ್ಟಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಅದು ಕರುಣೆಯೂ ಅಲ್ಲ, ಭಿಕ್ಷೆಯೂ ಅಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಮನವೊಲಿಸಲು ಆ ರೀತಿ ಹೇಳಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ (Shivamogga) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ಗೆದ್ದಿರುವುದರಿಂದ, ಮುಸಲ್ಮಾನರನ್ನು ತೃಪ್ತಿ ಪಡಿಸಲು ಇವರು ಹೊಟಿದ್ದಾರೆ. ರಾಜ್ಯದಲ್ಲೂ ಮನೆಗಳು ಬಿದ್ದಿವೆ, ಶಿವಮೊಗ್ಗದಲ್ಲಿ ಮನೆಗಳು ಬಿದ್ದಿವೆ. ಅವರಿಗೆ ಇನ್ನೂ ಪರಿಹಾರ ಬಂದಿಲ್ಲ. ಅವರಿಗೆ ಮೊದಲು ಪರಿಹಾರ ನೀಡಲಿ. ಕರ್ನಾಟಕದಲ್ಲಿ ಮನೆ ಬಿದ್ದಿರೋ ಕಡೆ ಸಿಎಂ, ಡಿಸಿಎಂ ಹೋಗಿ ಸಮಸ್ಯೆ ಕೇಳಿಲ್ಲ. ಅವರ ನಾಯಕರನ್ನು ತೃಪ್ತಿಪಡಿಸಲು ರಾಜ್ಯ ಸರ್ಕಾರದ ಅನುದಾನ ವಿನಿಯೋಗಿಸಬಾರದು ಎಂದಿದ್ದಾರೆ.
ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ವಿಚಾರವಾಗಿ, ಇದರಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಯಾವುದೇ ಸಮಾಜ ಸ್ವಾಭಾವಿಕವಾಗಿ ಬೇಡಿಕೆಗಳಿಗೆ ಮನವಿ ಸಲ್ಲಿಸುತ್ತಾರೆ. ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸರ್ಕಾರ ತಿಳಿದಿರಬೇಕು. ಪಂಚಮಸಾಲಿಯವರು ಮೊದಲೇ ಪ್ರತಿಭಟನೆ ಬಗ್ಗೆ ತಿಳಿಸಿದ್ದರು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ಮೊದಲು ಪ್ರತಿಭಟನಾಕಾರರ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೋರಬೇಕು. ಸರ್ಕಾರ ಬೇಡಿಕೆ ಬಗ್ಗೆ ಕೂತು ಮೊದಲು ಚರ್ಚೆ ಮಾಡಲಿ. ಲಾಠಿ ಚಾರ್ಜ್ ಕ್ರಮ ಸರಿಯಲ್ಲ ಎಂದು ಅವರು ಹೇಳಿದ್ದಾರೆ.