ರಾಯಚೂರು: ನಮ್ಮಲ್ಲಿ ಯಾವುದನ್ನೂ ಹೇಳದೇ ಎಲ್ಲವನ್ನೂ ತಾನೇ ಸಹಿಸಿಕೊಂಡಿದ್ದರಿಂದ ಇಂದು ನನ್ನ ಮಗಳು ಈ ರೀತಿ ಸಾವನ್ನಪ್ಪಿದ್ದಾಳೆ ಎಂದು ಮೃತ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ತಾಯಿ ರೇಣುಕಾದೇವಿ ಕಣ್ಣೀರು ಹಾಕಿದ್ದಾರೆ.
ಮಗಳ ಅಸಹಜ ಸಾವಿನ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆರೋಪಿ ಸುದರ್ಶನ್ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದನು. ಆದರೆ ಹೇಗೆ ತೊಂದರೆ ಕೊಡುತ್ತಿದ್ದನು ಎಂಬುದರ ಬಗ್ಗೆ ಮಗಳು ಯಾವತ್ತೂ ನಮ್ಮ ಜೊತೆ ಹೇಳಿಕೊಂಡಿಲ್ಲ. ಆತ ಬೆದರಿಕೆ ಹಾಕಿದ್ದಾನೋ ಗೊತ್ತಿಲ್ಲ. ಹೀಗಾಗಿ ಎಲ್ಲವನ್ನೂ ತಾನೇ ಸಹಿಸಿಕೊಂಡು ಇಂದು ಆಕೆ ಅಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ಕಣ್ಣೀರು ಹಾಕಿದ್ರು.
ಅನುಮಾನ ಬರಲು ಕಾರಣವೇನು?:
ಪರೀಕ್ಷೆಯಲ್ಲಿ ಅವಳು ಫೇಲ್ ಆಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದ್ರೆ ಅವಳು ಯಾವ ಪರೀಕ್ಷೆಯಲ್ಲಿಯೂ ಫೇಲ್ ಆಗಿಲ್ಲ. 6ನೇ ಸೆಮಿಸ್ಟರ್ ಕ್ಲೀಯರ್ ಇದೆ. ಈ ಸೆಮಿಸ್ಟರ್ ನ ಇಂಟರ್ನಲ್ಸ್ ಕೂಡ ಬರೆಯಲು ಹೋಗಿದ್ದಳು. ಹೀಗೆ ಏ.13ರಂದು ಪರೀಕ್ಷೆ ಬರೆಯಲು ಹೋದವಳು ಮನೆಗೆ ಮರಳಲಿಲ್ಲ. ಹೀಗಾಗಿ ನಾವು ಸಾಕಷ್ಟು ಹುಡುಕಾಟ ನಡೆಸಿದ್ದೇವೆ ಎಂದರು. ಇದನ್ನೂ ಓದಿ: #Justice4Madhu – ಆಕೆಯದ್ದು ಆತ್ಮಹತ್ಯೆಯಲ್ಲ ರೇಪ್ & ಮರ್ಡರ್?
ನಂತರ ಏ. 16ರಂದು ಶವವಾಗಿ ಪತ್ತೆಯಾದಳು. ಡೆತ್ ನೋಟ್ ಬರೆದಿಟ್ಟಿದ್ದಾಳೆ ಎಂದು ಹೆಳುತ್ತಾರೆ. ಆದ್ರೆ ಕೈ ಬರಹ ಆಕೆಯದ್ದೇ ಆಗಿದ್ದರೂ ಸಹ ಆಕೆಯಿಂದ ಬಲವಂತವಾಗಿ ಬರೆಸಿಕೊಂಡಿದ್ದಾರೆ ಎಂದು ನಾವು ಹೇಳುತ್ತೇವೆ. ಅಷ್ಟಕ್ಕೂ ಅವಳು ಅಲ್ಲಿ ಹೋಗಿ ಯಾಕೆ ಸಾಯಬೇಕಿತ್ತು. ಒಟ್ಟಿನಲ್ಲಿ ಅವಳ ಶವದ ಸ್ಥಿತಿ ನೋಡಿದ್ರೆ ಯಾರೂ ಆತ್ಮಹತ್ಯೆ ಎಂದು ನಂಬಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.
ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ಹೇಳುತ್ತಾರೆ. ಆದ್ರೆ ಸರಿಯಾದ ತನಿಖೆ ನಡೆಸಿದ್ರೆ ಗೊತ್ತಾಗುತ್ತೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೆಂದು ಎಂದು ಅವರು ನಿಖರ ತನಿಖೆಗೆ ಒತ್ತಾಯಿಸಿದ್ರು.
ತೊಂದ್ರೆ ಬಗ್ಗೆ ಹೇಳಿಕೊಂಡಿಲ್ಲ:
ನನ್ನ ಮಗಳು ಸುದರ್ಶನ್ ಹೇಗೆ ತೊಂದರೆ ಕೊಡುತ್ತಿದ್ದಾನೆ ಎಂದು ಇಲ್ಲಿಯವರೆಗೂ ಒಂದು ಮಾತು ಹೇಳಿಲ್ಲ. ಅವನು ಬೆದರಿಕೆ ಹಾಕಿದ್ದಾನೋ ಗೊತ್ತಿಲ್ಲ. ಆಕೆ ಒಂದು ಮಾತು ಹೇಳುತ್ತಿದ್ದರೆ ಇವತ್ತು ನನ್ನ ಮಗಳು ಈ ರೀತಿ ಸಾವನ್ನಪ್ಪುತ್ತಿರಲಿಲ್ಲ ಕಣ್ಣೀರು ಹಾಕಿದ್ರು.
ಭಯ, ಬೇಸರದಿಂದ ಹೇಳಿಲ್ಲ:
ಅಪ್ಪ-ಅಮ್ಮನಿಗೆ ಈ ಬಗ್ಗೆ ಹೇಳಿದ್ರೆ ಅವರು ಟೆನ್ಶನ್, ಭಯ, ಬೇಸರ ಮಾಡಿಕೊಳ್ಳುತ್ತಾರೋ ಎಂದು ಹೇಳಿಲ್ಲ ಅನಿಸುತ್ತದೆ. ಹೀಗಾಗಿ ಅವಳೊಬ್ಬಳೇ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಇದರಿಂದಾಗಿ ಇಂದು ಈ ರೀತಿ ಆಗಿಬಿಟ್ಟಿದೆ ಎಂದು ದುಃಖ ತೋಡಿಕೊಂಡರು.
ಸುದರ್ಶನ್ ಬಗ್ಗೆ:
ಈತ 5, 6 ವರ್ಷ ಅಂದರೆ ಪಿಯುಸಿಯಿದ್ದಾಗಿನಿಂದಲೇ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಮಧು ಹೇಳುತ್ತಾ ಇದ್ದಳು. ಅವನು ಲವ್ ಮಾಡ್ತೀನಿ ಎಂದು ಹೇಳುತ್ತಾ ಇದ್ದ. ಆದ್ರೆ ಅವನು ಅಷ್ಟೊಂದು ಪ್ರೀತಿಸುತ್ತಿದ್ದರೆ ಈ ರೀತಿ ಇಂದು ನನ್ನ ಮಗಳ ಸಾವು ಆಗುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಆತನ ಪ್ರೀತಿಗೆ ನನ್ನ ಮಗಳು ಒಪ್ಪಿಗೆ ಸೂಚಿಸಿರಲಿಲ್ಲ. ಅವನು ನಾನು ಲವ್ ಮಾಡ್ತೀನಿ ಎಂದು ಹೇಳುತ್ತಿದ್ದಾನೆ. ಹೀಗಾಗಿ ಇದೊಂದು ಒನ್ ವೇ ಲವ್ ಇರಬಹುದು ಅಂದ್ರು.
ಸುದರ್ಶನ್ ಕ್ಲಾಸ್ಮೆಟ್ ಅಲ್ಲ. ಅವನು ಎಂಜಿನಿಯರಿಂಗೂ ಸ್ಟೂಡೆಂಟ್ ಅಂತೂ ಅಲ್ಲವೇ ಅಲ್ಲ. ಅವನೇನೋ ನವೋದಯದಲ್ಲಿ ನೀರು ಹಾಕುವ ಕೆಲಸ ಮಾಡಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಇದೆ ಅಂದ್ರು.
ದೂರಿನ ಬಗ್ಗೆ:
ಆಕೆ ಕಾಣೆಯಾದ ದಿನವೇ ದೂರು ನೀಡಲು ಠಾಣೆಗೆ ಹೋಗಿದ್ದೆವು. ಆದ್ರೆ ಅವಳು ಸಿಗಬಹುದು ಎಂದು ಪೊಲೀಸರು ನಮ್ಮಿಂದ ದೂರು ಸ್ವೀಕರಿಸಿಕೊಳ್ಳದೇ ವಿಳಂಬ ಮಾಡುತ್ತಿದ್ದರು. ಇದೀಗ ದೂರು ಕೊಟ್ಟಿದ್ದೇವೆ. ಪ್ರಕರಣ ಕುರಿತು ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ರು.
https://www.youtube.com/watch?v=KM6s4gqVe7E
https://www.youtube.com/watch?v=1UqIdHyZKKY