ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ನಾವು ಎಂದೂ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಬಾರಿ ನಾವು ಇದನ್ನ ಸವಾಲಾಗಿ ಸ್ವೀಕಾರ ಮಾಡಿದ್ವಿ. ಆದರೆ ಯಾವುದೇ ಕಾರಣಕ್ಕೂ ಸೋಲಿನ ಬಗ್ಗೆ ಬೇಸರ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಫಲಿತಾಂಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸೋಲಿನ ಬಗ್ಗೆ ನಮಗೆ ಬೇಸರ ಇಲ್ಲ. ನಮ್ಮ 150 ಸ್ಥಾನವನ್ನು ಗೆಲ್ಲುವ ಗುರಿಯನ್ನು ನಿಶ್ಚಿತವಾಗಿ ಮಾಡೇ ಮಾಡ್ತೀವಿ. ಇನ್ನು ಮುಂದೆ ಯಾವುದೇ ಹಿನ್ನಡೆಯಾಗುವುದಿಲ್ಲ. ಉಪ ಚುನಾವಣೆಯಲ್ಲಿ ಗೆದ್ದ ತಕ್ಷಣ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಅಂತೇನಲ್ಲ. ಈ ಚುನಾವಣೆ 2018ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ ಎಂದು ತಿಳಿಸಿದರು.
ಉಪಚುನಾವಣೆ ಗೆಲುವಿನ ಕಾರಣಕ್ಕಾಗಿ ಹಗುರ ಮಾತುಗಳಿಂದ ಕಾಂಗ್ರೆಸ್ಸಿನವರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ರೀತಿ ಮಾಡುವುದರಿಂದ ಅವರ ಮೇಲಿದ್ದ ಗೌರವ ಇನ್ನು ಕಡಿಮೆಯಾಗುತ್ತಾ ಹೋಗುತ್ತದೆ ಎಂದರು.
ಈ ಎರಡೂ ಕ್ಷೇತ್ರಗಳಲ್ಲಿ ನಾವು ಎಂದೂ ಗೆಲುವು ಸಾಧಿಸಿಲ್ಲ. 22, 24 ದಿನ ಅಲ್ಲಿ ಪ್ರಚಾರ ಮಾಡಿದ್ವಿ. ಅಂತೆಯೇ ನಮಗೆ ಅಲ್ಲಿ ಜನಬೆಂಬಲವೂ ದೊರೆತಿತ್ತು. ಆದ್ರೆ ಸಚಿವರೆಲ್ಲರು ಅಲ್ಲಿಗೆ ಬಂದು ಕೊನೆಯ ಹಂತದಲ್ಲಿ ನಡೆಸಿದ ಕಾರ್ಯಚರಣೆ ಏನು ಅನ್ನೋದು ಜನರಿಗೆ ಗೊತ್ತಿದೆ ಎಂದು ಹೇಳಿದರು.
ಜನಪರ ತೀರ್ಪಿಗೆ ತಲೆಬಾಗುತ್ತೇನೆ. ಮತದಾರರ ತೀರ್ಪನ್ನ ಸ್ವಾಗತಿಸುತ್ತೇನೆ. ಮತದಾರರ ಭಾವನೆಗಳನ್ನ ಗೌರವಿಸಬೇಕು. ಇದು ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯಲ್ಲ. ನಮ್ಮ 150 ಗುರಿಗೆ ಈ ಫಲಿತಾಂಶದಿಂದ ಹಿನ್ನೆಡೆಯಾಗಿಲ್ಲ ಎಂದು ಬಿಎಸ್ವೈ ಹೇಳಿದರು.
ಬಿಎಸ್ವೈ ನಿವಾಸಕ್ಕೆ ನಾಯಕರ ದೌಡು: ಎರಡೂ ಕ್ಷೇತ್ರಗಳಲ್ಲಿ ಬಜೆಪಿಗೆ ಹಿನ್ನಡೆಯಾಗಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ನಿವಾಸಕ್ಕೆ ಶಾಸಕರಾದ ಆರ್.ಅಶೋಕ್, ಬಿವೈ ರಾಘವೇಂದ್ರ, ಸುರೇಶ್ ಗೌಡ, ನಾರಾಯಣಸ್ವಾಮಿ ಸೇರಿದಂತೆ ಹಲವರ ಆಗಮಿಸಿ ಮಾತುಕತೆ ನಡೆಸಿದ್ದಾರೆ.