ಬೆಂಗಳೂರು: ಜ್ಯೋತಿಷ್ಯ, ವಾಸ್ತುವನ್ನೆಲ್ಲಾ ಚಾಚೂ ತಪ್ಪದೇ ಪಾಲಿಸುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೀಗ ಗ್ರಹಣ ಭಯ ಕಾಡುತ್ತಿದೆ.
ಹೌದು, ಜುಲೈ 27ರಂದು ಕೇತುಗ್ರಸ್ಥ ಚಂದ್ರ ಗ್ರಹಣ ಘಟಿಸಲಿದೆ. ಕೇತುವಿನ ಅದಿದೇವತೆ ಶಿವನಿಗೆ ಕಾಟ ಕೊಡುವ ಗ್ರಹಣ ಇದಂತೆ. ಇದು ಮಗ ಹಾಗೂ ಮಕ್ಕಳ ಮಧ್ಯೆ ವೈಮನಸ್ಸು ತಿಕ್ಕಾಟ ತರುವ ಗ್ರಹಣವಂತೆ. ಕೇತುವಿನ ಅಧಿದೇವತೆ ಶಿವನಿಗೆ ತೊಂದರೆ ಕಾಟ ಕೊಡುವ ಗ್ರಹಣ ಇದಾಗಲಿದ್ದು ಅಪ್ಪ ಮಕ್ಕಳ ಮಧ್ಯೆ ಬಿರುಕು ಮೂಡಲಿದ್ಯಯಂತೆ ಎಂದು ತಿಳಿದು ಬಂದಿದೆ.
ಗ್ರಹಣದಿಂದಾಗಲಿರುವ ತೊಂದರೆಯ ಬಗ್ಗೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರೂ ಆಗಿರುವ ಖ್ಯಾತ ಜ್ಯೋತಿಷಿ ಸೋಮಸುಂದರ ದೀಕ್ಷಿತರು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಮೂಲಕ ದೊಡ್ಡಗೌಡರಿಗೆ ತಿಳಿಸಿದ್ದಾರೆ.
ಈ ಗ್ರಹಣ ರಾಜಕೀಯ ಅಸ್ಥಿರತೆಗೂ ಕಾರಣವಾಗಬಹುದು ಅನ್ನುವ ಭವಿಷ್ಯವಾಣಿಯನ್ನು ಹೇಳಿದ್ದಾರೆ. ಇದರಿಂದ ಭಯಗೊಂಡಿರುವ ರೇವಣ್ಣ ಗ್ರಹಣದಂದು ಶಿವನ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ನಡೆಸುವುದಾಗಿ ಜ್ಯೋತಿಷಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ನವಗ್ರಹಗಳಿಗೆ ಎಡೆಬಿಡದೇ ಕ್ಷೀರಾಭಿಷೇಕ, ಉದ್ಭವ ಶಿವಲಿಂಗಕ್ಕೆ ಕ್ಷೀರ ಎಳೆನೀರಿನ ಅಭಿಷೇಕ, ಸಂಪ್ರೋಕ್ಷಣಾ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ವ್ಯಕ್ತಿಗೆ ದೈವಾನುಗ್ರಹವಿದ್ದರೂ ಮಾನಸಿಕವಾಗಿ ಹಿಂಸೆ ಕೊಡಲಿರುವ ಗ್ರಹಣವಿದು ಅನ್ನೋದು ಜ್ಯೋತಿಷಿಗಳ ಮಾತಾಗಿದೆ.