ಮುಂಬೈ: ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗುವುದು ಎಂದು ತೀರ್ಪು ನೀಡಿ ವಿವಾದಕ್ಕೆ ಕಾರಣವಾಗಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಗಣೇಡಿವಾಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪುಷ್ಪಾ ಅವರು ಪ್ರಸ್ತುತ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದಾರೆ. ಅವರ ಅಧಿಕಾರವಧಿ ಶುಕ್ರವಾರ ಕೊನೆಗೊಳ್ಳಬೇಕಿತ್ತು. ಆದರೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ಅಧಿಕಾರವಧಿಯನ್ನು ವಿಸ್ತರಿಸಿರಲಿಲ್ಲ, ಬಡ್ತಿಯನ್ನೂ ನೀಡಿರಲಿಲ್ಲ. ತಮ್ಮ ಅಧಿಕಾರವಧಿ ಮುಗಿಯುವುದಕ್ಕೆ ಒಂದು ದಿನದ ಮೊದಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ : ಬಿಸ್ವಾ ಶರ್ಮಾ
2021ರ ಜನವರಿಯಲ್ಲಿ ಅವರು ನೀಡಿದ ವಿವಾದಿತ ತೀರ್ಪುಗಳ ನಂತರ, ಸುಪ್ರೀಂ ಕೋರ್ಟ್ ಕೊಲಿಜಿಯಂ, ಗಣೇಡಿವಾಲ ಅವರನ್ನು ಖಾಯಂ ನ್ಯಾಯಮೂರ್ತಿಯನ್ನಾಗಿ ನೇಮಿಸುವ ತನ್ನ ಶಿಫಾರಸನ್ನು ಹಿಂತೆಗೆದುಕೊಂಡಿತು. ಬದಲಿಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅವರ ಅಧಿಕಾರವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿತು.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ, ಚರ್ಮಕ್ಕೆ ಚರ್ಮ ತಾಗಿದರೆ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯ ಎಂದು ತೀರ್ಪು ನೀಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ನಾಪತ್ತೆಯಾಗಿದ್ದ ದಲಿತ ಮಹಿಳೆ ಶವವಾಗಿ ಹೂತಿಟ್ಟ ಸ್ಥಿತಿಯಲ್ಲಿ ಮಾಜಿ ಸಚಿವ ಆಶ್ರಮದ ಬಳಿ ಪತ್ತೆ!
ಹೆಣ್ಣು ಮಗು ಮೈ ಸವರಿದ ಆರೋಪಿಗೆ ನ್ಯಾಯಮೂರ್ತಿ ಪುಷ್ಪಾ ಅವರು ಜಾಮೀನು ಮಂಜೂರು ಮಾಡಿದ್ದರು. ಪೋಕ್ಸೊ ಕಾಯ್ದೆ ಅಡಿಯಲ್ಲಿನ ಪ್ರಕರಣದ ವಿಚಾರಣೆಯನ್ನು ಅವರು ನಡೆಸಿದ್ದರು. ಚರ್ಮಕ್ಕೆ ಚರ್ಮ ತಾಗಿಲ್ಲ. ಹೀಗಾಗಿ ಇದನ್ನು ಲೈಂಗಿಕ ದೌರ್ಜನ್ಯ ಎಂದು ಹೇಳಲಾಗದು ಎಂದು ತೀರ್ಪು ನೀಡಿದ್ದರು.