ಬ್ಯಾಂಕಾಕ್: ಥಾಯ್ಲೆಂಡ್ನ ಕೋರ್ಟ್ವೊಂದರಲ್ಲಿ ಗುಂಪು ಘರ್ಷಣೆ ವೇಳೆಯ ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಮುಸ್ಲಿಂ ಸಮುದಾಯದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಹೊರಡಿಸಿ, ಬಳಿಕ ನ್ಯಾಯಾಧೀಶರು ಸಾರ್ವಜನಿಕರಿಂದ ತುಂಬಿದ್ದ ನ್ಯಾಯಾಲಯದಲ್ಲೇ ಗುಂಡಿಕ್ಕಿಕೊಂಡಿದ್ದಾರೆ.
ಥಾಯ್ಲೆಂಡ್ನ ಯಾಲಾ ಕೋರ್ಟಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನ್ಯಾ. ಕಾನಾಕೋರ್ನ್ ಪಿಯಾಂಚಾನಾ ಅವರು ಮುಸ್ಲಿಂ ಸಮುದಾಯದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಹೊರಡಿಸಿ, ಬಳಿಕ ಸಾರ್ವಜನಿಕರಿಂದ ತುಂಬಿದ್ದ ನ್ಯಾಯಾಲಯದಲ್ಲೇ ನಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅದೃಷ್ಟವಶಾತ್ ನ್ಯಾಯಾಧೀಶರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೋರ್ಟಿನ ವಕ್ತಾರ ಸುರಿಯನ್ ಹೊಂಗ್ವಿಲ್ಲೈ ಮಾಹಿತಿ ನೀಡಿದ್ದಾರೆ.
ತಪ್ಪು ಮಾಡಿದರವರಿಗೆ ಶಿಕ್ಷಿಸಲು ನಮಗೆ ನಿಖರ ಹಾಗೂ ಸ್ಪಷ್ಟವಾದ ಸಾಕ್ಷ್ಯಗಳು ಬೇಕು. ಸರಿಯಾದ ಸಾಕ್ಷ್ಯಗಳು ಸಿಗದಿದ್ದರೆ ಆರೋಪಿಗಳಿಗೆ ಶಿಕ್ಷೆ ನೀಡಲು ಆಗುವುದಿಲ್ಲ. ಈ ಐವರು ಆರೋಪಿಗಳು ಅಪರಾಧ ಎಸಗಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಸಾಕ್ಷ್ಯಗಳ ಕೊರತೆಯಿಂದ ಅವರಿಗೆ ಶಿಕ್ಷೆ ನೀಡಲು ಆಗುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಹೆಚ್ಚು ಪಾರದರ್ಶಕ ಮತ್ತು ವಿಶ್ವಾಸಾರ್ಹ ಆಗಬೇಕು ಎಂದು ತೀರ್ಪು ಹೊರಡಿಸುವ ಮೊದಲು ನ್ಯಾ. ಕಾನಾಕೋರ್ನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ನಡೆಯುವುದನ್ನೂ ಸೇರಿಸಿ ಎಲ್ಲಾ ಕಲಾಪ ದೃಶ್ಯವನ್ನು ಫೇಸ್ಬುಕ್ನಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು. ಈ ಹೊಸ ಪ್ರಯತ್ನ ಎಲ್ಲರ ಗಮನ ಸೆಳೆದಿತ್ತು. ಗುಂಪು ಘರ್ಷಣೆ ವೇಳೆಯ ಹತ್ಯೆ ಪ್ರಕರಣ ಕುರಿತು ತೀರ್ಪಿನ ಹೊರಡಿಸಿದ ಬಳಿಕ ನ್ಯಾಯಾಧೀಶರು ಥಾಯ್ಲೆಂಡ್ನ ಮಾಜಿ ದೊರೆಯ ಫೋಟೋ ಮುಂದೆ ಪ್ರಮಾಣವನ್ನು ತಾವಾಗೇ ಬೋಧಿಸಿಕೊಂಡು, ಎಲ್ಲರ ಎದುರೇ ತಮ್ಮ ಬಳಿ ಇದ್ದ ಗನ್ ತೆಗೆದುಕೊಂಡು ಗುಂಡು ಹಾರಿಸಿಕೊಂಡಿದ್ದರು.
ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ನ್ಯಾಯಾಧೀಶರು ವೈಯಕ್ತಿಕ ಒತ್ತಡದಿಂದ ಈ ರೀತಿ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.
ಕಳೆದ 15 ವರ್ಷಗಳಲ್ಲಿ ಮಲಯ್ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ನಡುವಿನ ಘರ್ಷಣೆಗೆ ಥಾಯ್ಲೆಂಡ್ನಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಈ ಕೃತ್ಯದಿಂದ ಸಾವಿರಾರು ಶಂಕಿತರನ್ನು ಜೈಲಿಗೆ ಹಾಕಲಾಗಿದೆ, ಅಲ್ಲದೆ ಅನೇಕ ಪ್ರದೇಶದ ಮೇಲೆ ತುರ್ತು ಕಾನೂನುಗಳ ಅಡಿಯಲ್ಲಿ ನಿರ್ಬಂಧವನ್ನು ಹೇರಲಾಗಿದೆ.