ಮೈಸೂರು: ಸುಳ್ವಾಡಿ ದೇವಾಲಯ ಪ್ರಸಾದ ತಿಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಮೈಲಿಬಾಯಿ ಅವರ ಸಾವಿಗೆ ನಿಖರವಾದ ಕಾರಣವನ್ನು ಜೆಎಸ್ಎಸ್ ಆಸ್ಪತ್ರೆಯ ಅಧೀಕ್ಷಕರಾದ ಡಾ. ಗುರುಸ್ವಾಮಿ ಅವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುಸ್ವಾಮಿ ಅವರು, ಶುಕ್ರವಾರ ಮೈಲಿಬಾಯಿ ತಮ್ಮ ಪತಿ ಮತ್ತು ಮಗಳ ಜೊತೆ ಆಸ್ಪತ್ರೆಗೆ ಬಂದಿದ್ದರು. ದಂಪತಿ ಒಟ್ಟಿಗೆ ಪ್ರಸಾದ ತಿಂದಿದ್ದು, ಮೈಲಿಬಾಯಿ ಅವರ ಪತಿ ಆಸ್ಪತ್ರೆಗೆ ಬರುತ್ತಿದ್ದಂತೆ ಮೃತಪಟ್ಟಿದ್ದರು. ಮೈಲಿಬಾಯಿ ಸ್ಥಿತಿ ಸಹ ಗಂಭೀರವಾಗಿದ್ದ ಕಾರಣ ಬಿಪಿ ಚೆಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಉಸಿರಾಡಲು ತುಂಬಾ ತೊಂದರೆ ಪಡುತ್ತಿದ್ದರು. ನಾವು ತಕ್ಷಣ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಆರಂಭಿಸಿದೇವು ಎಂದು ತಿಳಿಸಿದರು.
ಇಂದು ಐಜಿಪಿ ಅವರು ಹೇಳಿದ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಕ್ರಿಮಿನಾಶಕ ಮಿಶ್ರಣದ ಪರಿಣಾಮ ಘೋರವಾಗಿರುತ್ತದೆ. ವಿಷ ಆಹಾರ ಸೇವಿಸಿ ಆರೇಳು ಗಂಟೆ ನಂತರ ಮೈಲಿಬಾಯಿ ಅವರು ಆಸ್ಪತ್ರೆಗೆ ಬಂದಿದ್ದರು. ಅಷ್ಟರಲ್ಲಿ ಅವರ ದೇಹದ ರಕ್ತದಲ್ಲಿ ವಿಷ ಸೇರಿ ಹೋಗಿತ್ತು. ನಂತರ ಅಂಗಾಂಗಗಳು ಒಂದೊಂದಾಗಿ ವೈಫಲ್ಯವಾಗತೊಡಗಿತು. ಮೈಲಿಬಾಯಿ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಲಿಲ್ಲ. ಪ್ರಸಾದ ಸೇವಿಸಿದ ಎರಡು ಗಂಟೆ ಒಳಗಡೆ ಆಸ್ಪತ್ರೆಗೆ ದಾಖಲಾಗಿದ್ದರೆ ಅವರನ್ನು ಉಳಿಸಬಹುದಿತ್ತು ಎಂದು ಗುರುಸ್ವಾಮಿ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಯಲದಲ್ಲಿ ಪೂಜೆ ಮಾಡಿ ಭಕ್ತರಿಗೆ ರೈಸ್ ಬಾತ್ ಪ್ರಸಾದವನ್ನು ನೀಡಲಾಗಿತ್ತು. ಅದನ್ನು ತಿಂದ ತಕ್ಷಣ ಸುಮಾರು 80 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲೇ ವೈದ್ಯರು ಪ್ರಸಾದದಲ್ಲಿ ಕ್ರಿಮಿನಾಶಕ ಮಿಶ್ರಣವಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದರು. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv