ವಿಜಯಪುರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಎಸ್ಐಟಿ ಬುಲಾವ್ ನೀಡಿದೆ.
ಬೆಂಗಳೂರಿಗೆ ತೆರಳುವ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಯಾವ ವಿಚಾರಣೆಗೆ ಎಂಬುದು ಗೊತ್ತಿಲ್ಲ, ಅಲ್ಲಿ ಹೋದ ಬಳಿಕವೇ ಗೊತ್ತಾಗಲಿದೆ. ಪರಶುರಾಮ ನನ್ನ ಜೊತೆ ಬಹಳ ಹತ್ತಿರದಿಂದ ಇದ್ದ, ಅವನು ಇಂತಹ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು ನನಗೆ ಶಾಕ್ ಆಗಿದೆ. ಪರಶುರಾಮ ಈ ಕೇಸ್ ನಿಂದ ನಿರ್ದೋಷಿ ಆಗಿ ಬರಲಿ ಎಂದು ಆಶಿಸುತ್ತೇನೆ. ಅಲ್ಲದೆ ಅವನು ಬಹಳ ಮುಗ್ಧ ವ್ಯಕ್ತಿಯಾಗಿದ್ದಾನೆ. ಪರಶುರಾಮ ವಾಗ್ಮೋರೆ ಕುಟುಂಬದವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಗೆ ಸಹಾಯ ಆಗಲಿ ಎಂದು ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಪೊಲೀಸ್ ನೋಟಿಸ್ ಮೂಲಕ ರಾಕೇಶ್ ಗೆ ಬೆಂಗಳೂರಿಗೆ ಬರಲು ಬುಲಾವ್ ನೀಡಿದ್ದು, ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯ ಕಲಂ 302, 120(B), 114, 118, 35 ಐಪಿಸಿ 3, 25 ಆರ್ಮ್ಸ್ ಆಕ್ಟ್ ಪ್ರಕರಣದಲ್ಲಿ ತನಿಖೆ ನಡೆಸಲು ವಿಚಾರಣೆಗಾಗಿ ಬುಲಾವ್ ಮಾಡಲಾಗಿದೆಯಂತೆ. ಇಂದು ಬೆಳಗ್ಗೆ ಸಿಐಡಿ ಕಚೇರಿಗೆ ಹಾಜರಾಗುವಂತೆ ಸಿಐಡಿ ಮುಖ್ಯ ವಿಚಾರಣಾ ಅಧಿಕಾರಿ ಎಮ್ ಎನ್ ಅನುಚೇತನ್ ರಿಂದ ನೋಟಿಸ್ ನೀಡಲಾಗಿದ್ದು, ಅದರಂತೆ ಹಾಜರಾಗಲು ಶ್ರೀರಾಮಸೇನೆ ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ್ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಇವರ ಜೊತೆ ವಾಗ್ಮೋರೆ ತಂದೆ ಕೂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ
ಇನ್ನು ಪ್ರಕರಣ ಸಂಬಂಧ ಎಸ್ಐಟಿ ವಶದಲ್ಲಿದ್ದ ಸುನಿಲ್ ಅಗಸರ್ ನ್ನು ಬಿಡುಗಡೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ನಿವಾಸಿ ಸುನಿಲ್ ಅಗಸರ್ ಎಸ್ಐಟಿ ಪೊಲೀಸರು ಕಳೆದ ರವಿವಾರ ವಶಕ್ಕೆ ತೆಗೆದುಕೊಂಡಿದ್ದರು. ಇನ್ನು ವಿಚಾರಣೆ ಬಳಿಕ ಎಸ್ಐಟಿ ಪೊಲೀಸರು ಕ್ಲೀನ್ಚಿಟ್ ನೀಡಿ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!