ಬೆಂಗಳೂರು: ಬಾಹುಬಲಿಗೆ ಬಟ್ಟೆ ಹಾಕಿ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದ ಪತ್ರಕರ್ತ ಪ್ರಭು ಆದಿ ಇದೀಗ ಕ್ಷಮೆಯಾಚಿಸಿದ್ದಾರೆ.
ಕ್ಷಮೆ ಕೋರಿ ವಿಧಾನಸೌಧದ ಮುಖ್ಯಮಂತ್ರಿ ಸಚಿವಾಲಯದಿಂದ ಮನವಿ ಪತ್ರ ವಾಪಸ್ ಪಡೆದ ಪ್ರಭು ಆದಿ, ನನ್ನ ಪತ್ರಕ್ಕೆ ಜೈನಧರ್ಮದಿಂದ ವಿರೋಧ ಉಂಟಾಗಿದೆ. ಧರ್ಮಕ್ಕೆ ಧಕ್ಕೆ ಉಂಟಾಗಿ, ಅವಹೇಳನಾಕಾರಿ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ನಾನು ಮತ್ತು ನನ್ನ ಸಂಸಾರ ಮನನೊಂದು ಜೈನ ಧರ್ಮದವರ ಬಳಿ ಕ್ಷಮೆ ಕೊರುತ್ತೇನೆ. ಮುಂದಾಲೋಚನೆ ಮಾಡದೆ, ಸರಿಯಾಗಿ ತಿಳಿಯದೆ, ವೈಯಕ್ತಿಕವಾಗಿ ಮನವಿ ನೀಡಿದ್ದೆ. ಇದೊಂದು ಆಘಾತಕಾರಿ ಸಂಗತಿ, ಈ ಕುರಿತು ಜೈನಧರ್ಮದ ಗುರುಗಳ ಬಳಿ ಹೋಗಿ ಕ್ಷಮೆ ಕೋರಿದ್ದೇನೆ ಅಂತ ತನ್ನ ಕ್ಷಮಾಪಣಾ ಪತ್ರದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಪತ್ರಕರ್ತರ ಪತ್ನಿ ಕಣ್ಣೀರು ಹಾಕಿದ್ದಾರೆ.
ಪತ್ರದಲ್ಲಿ ಏನಿತ್ತು?
ದಿನದಿಂದ ದಿನಕ್ಕೆ ಮಾನವನ ಜೀವನದ ಶೈಲಿಗಳು, ಮಾನವನ ವಿಕಾಸವೂ ಉನ್ನತೀಕರಣವಾಗಿ ಪ್ರತಿಯೊಬ್ಬರೂ ಜೀವನದ ಮೌಲ್ಯಗಳನ್ನು ತಿಳಿದುಕೊಂಡು, ತಂತ್ರಜ್ಞಾನದಿಂದ ಜಗತ್ತಿನ ಆಗುಹೋಗುಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುವ ಇಂತಹ ಸಂದರ್ಭದಲ್ಲಿ ಜೈನ ಧರ್ಮಗುರು ಬಾಹುಬಲಿಯವರು 9ನೇ ಶತಮಾನದಲ್ಲಿ ದಿಗಂಬರರಾಗಿದ್ದರು ಎನ್ನುವ ಕಾರಣದಿಂದ ಅಲ್ಲಿಂದ ಇಲ್ಲಿಯವರೆಗೆ ಧರ್ಮಗುರು ಬಾಹುಬಲಿಯವರನ್ನು ಹಾಗೆಯೇ ದಿಗಂಬರರಾಗಿ ಉಳಿಸಿಕೊಂಡಿರುವುದು ಒಂದು ವಿಪರ್ಯಾಸವೇ ಆಗಿದೆ. ಇದು ಮೌಢ್ಯತೆಗೆ ಹಿಡಿದ ಕನ್ನಡಿಯಾಗಿದೆ. ಆಗಿನ ಸಂದರ್ಭದಲ್ಲಿ ಧರ್ಮಗುರು ಬಾಹುಬಲಿಯವರು ತೆಗೆದುಕೊಂಡಂತ ನಿರ್ಧಾರವು ಅವರಿಗೆ ಸರಿ ಅನಿಸಿರಬಹುದು. ಆದ್ರೆ ಅಂದಿನಿಂದ ಇಂದಿನವರೆಗೆ ಮಾನವನ ವಿಕಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲ್ಲದೇ ಮಾನವನ ಪ್ರಗತಿಯು ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಾ ಸಾಗಿದೆ.
ಈ ಕಾರಣಕ್ಕಾಗಿ ದಿಗಂಬರರಾಗಿರುವ ಬಾಹುಬಲಿಯನ್ನು ನೋಡೋದಕ್ಕೆ ಅಸಹ್ಯ ಅನಿಸುತ್ತದೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ನವರು ಇದರ ಬಗ್ಗೆ ಗಮನ ಹರಿಸಿ ಬಟ್ಟೆ ಹಾಕಲಿ. ಕಾಲ ಈಗ ಬದಲಾಗಿದೆ, ಬಾಹುಬಲಿನಾ ನೋಡೋಕೆ ಕಷ್ಟವಾಗಲಿದೆ. ಇದ್ರಿಂದ ಧಾರ್ಮಿಕ ನಂಬಿಕೆಯ ವಿಚಾರ ಬರೋದಿಲ್ಲ. ಕನಿಷ್ಠ ಗೊಮಟೇಶ್ವರನ ಮಾನವನ್ನು ಮುಚ್ಚಲು ಚಡ್ಡಿಯಾದರೂ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.
ಈ ಪತ್ರದ ಪ್ರತಿಯನ್ನು ಆದಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಗೂ ಕಳುಹಿಸಿ ಮನವಿ ಮಾಡಿದ್ದರು.