ರಾಂಚಿ: ನಾಲ್ಕನೇಯ ಬಾರಿಗೆ ಜಾರ್ಖಂಡ್ (Jharkhand) ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ (Hemant Soren) ಇಂದು (ನ.28) ಪ್ರಮಾಣ ವಚನ ಸ್ವೀಕರಿಸಿದರು.
ರಾಂಚಿಯ ಮೊರಾದಾಬಾದ್ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರಮಾಣವಚನ ಬೋಧಿಸಿದರು. ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು INDIA ಒಕ್ಕೂಟದ ಪ್ರಮುಖ ನಾಯಕರು ರಾಂಚಿಯ ಮೊರಾದಾಬಾದ್ ಮೈದಾನಕ್ಕೆ ಆಗಮಿಸಿದ್ದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಇಸ್ಕಾನ್ ಬ್ಯಾನ್ಗೆ ಒಪ್ಪದ ಬಾಂಗ್ಲಾ ಹೈಕೋರ್ಟ್
ಮಹಾಘಟಬಂಧನ್ ಮಿತ್ರಪಕ್ಷಗಳು ಕ್ಯಾಬಿನೆಟ್ ಸ್ಥಾನಗಳ ಕುರಿತು ಇನ್ನೂ ಮಾತುಕತೆ ನಡೆಸುತ್ತಿರುವ ಕಾರಣ ಇಂದು ಹೇಮಂತ್ ಸೋರೆನ್ ಮಾತ್ರ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಇದೇ ನವೆಂಬರ್ ತಿಂಗಳು 2 ಹಂತಗಳಲ್ಲಿ ನಡೆದ ಜಾರ್ಖಂಡ್ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಸತತ 2ನೇ ಬಾರಿಗೆ ಅಧಿಕಾರ ಹಿಡಿಯಿತು. 81 ಸ್ಥಾನಗಳಲ್ಲಿ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಗಳಿಸಿತು. ಜೆಎಂಎಂ (JMM) 34 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16, ಆರ್ಜೆಡಿ 4 ಮತ್ತು ಸಿಪಿಐ (ಎಂ) ಎರಡು ಸ್ಥಾನಗಳನ್ನು ಗೆದ್ದುಕೊಂಡಿತು.