ರಾಂಚಿ: ಕಳೆದ ವರ್ಷ ಜಾರ್ಖಂಡ್ನ ಧನಬಾದ್ನಲ್ಲಿ ನಡೆದಿದ್ದ ನ್ಯಾಯಾಧೀಶ ಉತ್ತಮ್ ಆನಂದ್ (49) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಉತ್ತಮ್ ಆನಂದ್ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಆಟೋ ರಿಕ್ಷಾ ಚಾಲಕ ಮತ್ತು ಆತನ ಸಹಚರನನ್ನು ದೋಷಿ ಎಂದು ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದ ಆನಂದ್ ಹತ್ಯೆ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕ ಲಖನ್ ವರ್ಮಾ ಮತ್ತು ಆತನ ಸಹಚರ ರಾಹುಲ್ ವರ್ಮಾ ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ರಜನಿಕಾಂತ್ ಪಾಠಕ್ ತೀರ್ಪು ನೀಡಿದರು. ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 6 ರಂದು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. ಇದನ್ನೂ ಓದಿ: ಚಿಕ್ಕ ವಯಸ್ಸಿನಿಂದಲೂ ಧರ್ಮದ ಬಗ್ಗೆ ಅಭಿಮಾನ – ಹಿಜಬ್ ಹೋರಾಟದಿಂದ ಸಿಟ್ಟಾಗಿದ್ದೆ
ಏನಿದು ಪ್ರಕರಣ?:
ಆನಂದ್ ಕಳೆದ ವರ್ಷ ಜುಲೈ 28 ರಂದು ವಾಕಿಂಗ್ ಮಾಡುತ್ತಿದ್ದಾಗ ಆಟೋ ರಿಕ್ಷಾದಿಂದ ಗುದ್ದಿ ಹತ್ಯೆ ಮಾಡಲಾಗಿತ್ತು. ಧನ್ಬಾದ್ನ ರಣಧೀರ್ ವರ್ಮಾ ಚೌಕ್ನಲ್ಲಿ ನ್ಯಾಯಾಧೀಶರು ರಸ್ತೆಯ ಬದಿಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಂದ ಈ ಪ್ರಕರಣವನ್ನು ಜಾರ್ಖಂಡ್ ಸರ್ಕಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿತ್ತು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್ಐಎ
ಹತ್ಯೆಗೆ ಕಾರಣ:
ಉತ್ತಮ್ ಆನಂದ್ ಹತ್ಯೆಗೂ ಮುನ್ನ ಹೈಪ್ರೊಫೈಲ್ ಕೇಸ್ವೊಂದರ ವಿಚಾರಣೆ ನಡೆಸಿದ್ದರು. ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಮಾಜಿ ಶಾಸಕರ ಆಪ್ತರಾಗಿದ್ದ ರಂಜಯ್ ಕೊಲೆ ಪ್ರಕರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲೂ ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರು. ಬಳಿಕ ಹತ್ಯೆ ನಡೆದಿತ್ತು. ಹತ್ಯೆಯ ಬಳಿಕ ಆಟೋ ರಿಕ್ಷಾ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಮೃತ ನ್ಯಾಯಾಧೀಶರ ತಂದೆ ಸದಾನಂದ್ ಪ್ರಸಾದ್ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ಸಿಬಿಐ ಕೋರ್ಟ್ಗೆ ಚಾರ್ಚ್ಶೀಟ್ ಸಲ್ಲಿಸಿತ್ತು.