ರಾಂಚಿ: ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮತ್ತೊಂದು ಅಘಾತಕಾರಿ ಆತ್ಮಹತ್ಯೆ ಘಟನೆ ವರದಿಯಾಗಿದೆ. ರಾಂಚಿಯ ಒಂದೇ ಕುಟುಂಬದ 7 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಘಟನೆ ನಡೆದಿದ್ದು, ಸಾಮೂಹಿಕ ಆತ್ಮಹತ್ಯೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ ಈ ಕುರಿತು ಸಂಪೂರ್ಣ ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಪತಿ ದೀಪಕ್ ಝಾ (40), ಪತ್ನಿ ಸೋನಿ ಝಾ, ರೂಪೇಶ್ ಝಾ, ಪುತ್ರಿ ದೃಷ್ಟಿ(7), ಕಿರಿಯ ಪುತ್ರ ಗಂಜು ಹಾಗೂ ದೀಪಕ್ ಝಾ ತಂದೆ, ತಾಯಿ ಮೃತದೇಹಗಳು ಸಹ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಗೂ ಒಂದು ತಿಂಗಳ ಮುನ್ನ 6 ಮಂದಿಯ ಕುಟುಂಬವೊಂದು ಜಾರ್ಖಂಡ್ನ ಹಜಾರಿಬಾಗ್ ಆಪಾರ್ಟ್ ಮೆಂಟ್ವೊಂದರಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿತ್ತು. ಈ ವೇಳೆ ತನಿಖೆ ನಡೆಸಿದ ಪೊಲೀಸರು ಕುಟುಂಬದ ಸಾಮೂಹಿಕ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ಸ್ಪಷ್ಟನೆ ನೀಡಿದ್ದರು.