ಬಾಗಲಕೋಟೆ: ಜಿಲ್ಲೆಯ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡರ ಕಾರ್ಖಾನೆ ರೈತರೊಬ್ಬರಿಗೆ ನಾಮ ಹಾಕಿರೋದು ಗೊತ್ತಾಗಿದೆ.
ಬ್ಯಾಂಕ್ ಅಕೌಂಟ್ ಮಾಡಿಕೊಡ್ತೀವಿ ಅಂತ ರೈತನಿಂದ ದಾಖಲೆ ಪಡೆದು ರೈತನ ಹೆಸರಲ್ಲೇ ಸಾಲ ತೆಗೆದುಕೊಂಡಿದ್ದಾರೆ. ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಕಬ್ಬಿನ ಬಾಕಿ ಹಣ ನೀಡದೆ ಶಾಸಕರು ಸತಾಯಿಸುತ್ತಿದ್ದು, ರೈತನಿಗೆ ಗೊತ್ತಾಗದಂತೆ ಲಕ್ಷಾಂತರ ರೂಪಾಯಿ ಸಾಲ ಪಡೆಯಲಾಗಿದೆ. ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಸೇರಿದ ಜಮಖಂಡಿ ಶುಗರ್ಸ್ ಕಾರ್ಖಾನೆ ಈ ರೀತಿ ರೈತನಿಗೆ ಮಕ್ಮಲ್ ಟೋಪಿ ಹಾಕಿದೆ.
2012-13ರಲ್ಲಿ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ನಿವಾಸಿ ಪರಗೌಡ ಶೇಗುಣಶಿ ಹೆಸರಿನಲ್ಲಿ 10 ಲಕ್ಷ 95 ಸಾವಿರದ 63 ರೂಪಾಯಿ ಸಾಲ ಪಡೆಯಲಾಗಿದೆ. ಎರಡು ದಿನದ ಹಿಂದೆ ಬೆಳೆ ಸಾಲ ಪಡೆಯಲು ಸಿಂಡಿಕೇಟ್ ಬ್ಯಾಂಕ್ಗೆ ಹೋದಾಗ ಪರಗೌಡ ಅವರ ಹೆಸರಲ್ಲಿ ಸಾಲ ಇರುವ ವಿಷಯ ಗೊತ್ತಾಗಿದೆ. ಓರ್ವ ಶಾಸಕರಿಗೆ ಸೇರಿದ ಫ್ಯಾಕ್ಟರಿಯಿಂದಲೇ ಇಂತಹ ವಂಚನೆಯಾಗಿದೆ ಅಂದ್ರೆ ಬೇರೆಯವರ ಮಾಲೀಕತ್ವದ ಕಂಪನಿಗಳಲ್ಲಿ ಕಥೆ ಏನು ಅನ್ನೋದು ಪ್ರಶ್ನೆಯಾಗಿದೆ.