ಬೆಂಗಳೂರು: ಜೀತ್ ಕರ್ ಆವೊ, ಬೇಟಾ(ಗೆದ್ದು ಬಾ ಮಗನೇ) ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಆಶೀರ್ವಾದ ಮಾಡಿದ್ದಾರೆ.
ಮಂಗಳವಾರ ರಾತ್ರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬರುವ ಬನಶಂಕರಿಯಿಂದ ಜೆಪಿ ನಗರದವರೆಗೆ ಅಮಿತ್ ಶಾ, ತೇಜಸ್ವಿ ಸೂರ್ಯ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು. ರೋಡ್ ಶೋದ ವಾಹನದಿಂದ ಇಳಿಯುವ ಸಂದರ್ಭದಲ್ಲಿ ಅಮಿತ್ ಶಾ ಜೊತೆ ತೇಜಸ್ವಿ ಸೂರ್ಯ ಸೆಲ್ಫಿ ಕ್ಲಿಕ್ಕಿಸಿ ಆಶೀರ್ವಾದ ಪಡೆದರು.
ರೋಡ್ ಶೋದ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ ತೇಜಸ್ವಿ ಸೂರ್ಯ, ಜೀತ್ ಕರ್ ಆವೊ, ಬೇಟಾ ಎಂದು ಅಮಿತ್ ಶಾ ನನ್ನಲ್ಲಿ ಹೇಳಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ಅವರು ಆಡಿದ ಮಾತು ನನ್ನ ಮನದಲ್ಲಿ ಪ್ರತಿಧ್ವನಿಸುತ್ತಿದೆ. ನಿಮ್ಮನ್ನು ಸಂಸತ್ತಿನಲ್ಲಿ ನೋಡುತ್ತೇನೆ ಹಾಗೂ ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರಿಗೆ ಮಾತು ಕೊಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರಾತ್ರಿ 9 ಗಂಟೆಗೆ ಬನಶಂಕರಿಗೆ ಅಮಿತ್ ಶಾ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಮೊಬೈಲ್ ಲೈಟ್ ಆನ್ ಮಾಡಿ ಅವರನ್ನು ಸ್ವಾಗತಿಸಿದರು. ಅಮಿತ್ ಶಾ ಮತಯಾಚನೆಯ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ, ಆರ್ ಅಶೋಕ್, ವಿ ಸೋಮಣ್ಣ, ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಅಶ್ವಥ್ನಾರಾಯಣ ವಾಹನದ ವೇದಿಕೆ ಮೇಲೆ ನಿಂತಿದ್ದರು.
ತೇಜಸ್ವಿನಿ ಅನಂತ್ಕುಮಾರ್ ವಾಹನ ಏರಿದ ಕೂಡಲೇ ಸೋಮಣ್ಣ ಅವರನ್ನು ಹಿಂದಕ್ಕೆ ಕಳುಹಿಸಿ ಯಡಿಯೂರಪ್ಪ ಪಕ್ಕದಲ್ಲೇ ತೇಜಸ್ವಿನಿ ಅನಂತ್ಕುಮಾರ್ ಅವರನ್ನು ಅಮಿತ್ ಶಾ ನಿಲ್ಲಿಸಿ ಮತ ಯಾಚನೆ ಮಾಡಿದರು. ತೆರೆದ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕಾರ್ಯಕರ್ತರು “ಮೋದಿ ಮೋದಿ” ಘೋಷಣೆ ಕೂಗಿ ಬೆಂಬಲಿಸುತ್ತಿದ್ದರು.
ರೋಡ್ ಶೋ ಹಿನ್ನೆಲೆಯಲ್ಲಿ ಬನಶಂಕರಿ ಬಸ್ ನಿಲ್ದಾಣದಿಂದ ಜೆಪಿ ನಗರ ಸಿಗ್ನಲ್ ವರೆಗಿನ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.