ಚಿಕ್ಕಬಳ್ಳಾಪುರ: ಜೆಡಿಎಸ್ ಕಾರ್ಯಕರ್ತನೊರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚೀಮಂಗಲ-ಚಿಕ್ಕದಾಸರಹಳ್ಳಿ ಮಾರ್ಗ ಮಧ್ಯೆ ನಾರಾಯಣದಾಸರಹಳ್ಳಿ ಬಳಿ ನಡೆದಿದೆ.
ಅಂಜಿನಪ್ಪ(50) ಮೃತ ವ್ಯಕ್ತಿ. ಈತ ಕನ್ನಮಂಗಲ ಗ್ರಾಮದ ಜೆಡಿಎಸ್ ಕಾರ್ಯಕರ್ತನಾಗಿದ್ದನು. ಶಿಡ್ಲಘಟ್ಟ ತಾಲೂಕು ಕಚೇರಿ ಬಳಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದ ಅಂಜಿನಪ್ಪ, ತಡರಾತ್ರಿ ಶಿಡ್ಲಘಟ್ಟ ಪಟ್ಟಣದಿಂದ ಸ್ವಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ಇದು ಅಪಘಾತವೋ ಅಥವಾ ಯಾರಾದ್ರೂ ಅಂಜಿನಪ್ಪನನ್ನು ಕೊಲೆ ಮಾಡಿ ಅಪಘಾತ ಎಂಬಂತೆ ಬಿಂಬಿಸಿದ್ರೋ ಎಂಬ ಅನುಮಾನ ಮೂಡಿದೆ.
ಘಟನೆ ಸಂಬಂಧಿಸಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ಅಂಜಿನಪ್ಪ ಸಹೋದರ ಅಶ್ವತ್ಥಪ್ಪ ದೂರು ನೀಡಿದ್ದಾರೆ. ಅಂಜಿನಪ್ಪನನ್ನು ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆಲ ಯುವಕರು ಕೊಲೆ ಮಾಡಿರಬಹುದು ಅಂತ ಅನುಮಾನ ವ್ಯಕ್ತಪಡಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ
ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಮಾಡಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದು, ಇದು ಕೊಲೆಯೋ ಅಥವಾ ಅಪಘಾತವೋ ಎಂಬ ಅಸಲಿ ಸತ್ಯ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಇದನ್ನೂ ಓದಿ: ಬಹುಮತ ಇಲ್ಲದಿದ್ದರೂ ಮೂರು ಪಕ್ಷದ ಬೆಂಬಲದಿಂದ ಸಭಾಪತಿಯಾಗಿದ್ದೆ: ಬಸವರಾಜ ಹೊರಟ್ಟಿ