ಬೆಂಗಳೂರು: ಕಾಂಗ್ರೆಸ್ನ ಜನಾಶೀರ್ವಾದ, ಬಿಜೆಪಿಯ ಪರಿವರ್ತನಾ ಯಾತ್ರೆಗೆ ಸೆಡ್ಡು ಹೊಡೆಯಲು ಜೆಡಿಎಸ್ ಇಂದು ‘ವಿಕಾಸ ಪರ್ವ’ ಸಮಾವೇಶ ಆಯೋಜಿಸಿತ್ತು. ಬೆಂಗಳೂರಿನ ಯಲಹಂಕದ ಬಳಿ ನಡೆದ ಬೃಹತ್ ಶಕ್ತಿ ಪ್ರದರ್ಶನದಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿಯ ಫಲವಾಗಿ ಇವತ್ತು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಿರ್ನಾಮವಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೆಡಿಎಸ್ ಪಕ್ಷವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಹೇಳಿದರು.
ಈ ವೇಳೆ ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಕರ್ನಾಟಕಕ್ಕೆ ಆಗಿರುವ ಅನ್ಯಾಯ ತಡೆಯಲು ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯವಿದೆ. ರಾಜ್ಯದ ಋಣ ತೀರಿಸಲು ನಾನು ಎರಡನೇ ಜನ್ಮ ಎತ್ತಿದ್ದೇನೆ. ನನ್ನ ಜೀವನವನ್ನ ನಿಮ್ಮ ಸೇವೆಗೆ ಸಮರ್ಪಿಸಿಕೊಂಡಿದ್ದೇನೆ. ನನಗೊಂದು ಅವಕಾಶ ನೀಡಿ ಮತದಾರರಲ್ಲಿ ಮನವಿ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಕನ್ನಡಿಗರು. ಪ್ರಧಾನಿ ಆಗಿ 10 ತಿಂಗಳು ಸೇವೆ ಮಾಡಿದ್ದಾರೆ. ಅವರಿಗಾಗಿ ಪಕ್ಷ ಅಧಿಕಾರ ನೀಡಿ. ನಿಮ್ಮ ಋಣ ತೀರಿಸುತ್ತೇನೆ. ರೈತರು ಎಂದು ಸಾಲ ಮಾಡದ ರೀತಿ ಮಾಡುತ್ತೇನೆ. ಆಟೋ ಚಾಲಕರಿಗೆ ದುಡಿಮೆಯ ಶಕ್ತಿ ನೀಡುತ್ತೇನೆ. ಒಂದು ಬಾರಿ ನನ್ನನ್ನ ಪರೀಕ್ಷೆ ಮಾಡಿ ಎಂದರು.
ಅಧಿಕಾರ ಆಸೆ ಇಲ್ಲ: ನಾನು ಜೀವನದಲ್ಲಿ ನಾನು ಎಲ್ಲಾ ನೋಡಿದ್ದೇನೆ. ನನಗಾಗಿ ನಾನು ಸಿಎಂ ಆಗಬೇಕು ಎಂಬ ಆಸೆ ನನಗಿಲ್ಲ ಆದರೆ ರಾಜ್ಯದ ಜನತೆಗಾಗಿ, ಬಡವರಿಗಾಗಿ, ನೊಂದವರಿಗಾಗಿ ರೈತರಿಗಾಗಿ ಸಿಎಂ ಆಗಬೇಕು ಎಂಬ ಹಂಬಲವಿದೆ. ರೈತರ ಕುಟುಂಬಗಳು ನೋವು ತಿನ್ನುತ್ತಿವೆ. ನಮ್ಮ ಕುಟುಂಬದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾವು ಅಧಿಕಾರಕ್ಕಾಗಿ ಯಾವತ್ತು ಆಸೆ ಪಟ್ಟಿಲ್ಲ. ಎಂದು ನಾಟಕ ಮಾಡಿಲ್ಲ. ನಾನು ಭಾವನಾತ್ಮಕ ಜೀವಿ ಎಂದು ವೇದಿಕೆಯಲ್ಲೇ ಭಾವುಕರಾದರು.
ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸಲು ಕೇಂದ್ರ ಸರ್ಕಾರಗಳಿಂದ ಅನ್ಯಾಯವಾಗುತ್ತಿರುವುದು ತಡೆಯಲು ಪ್ರಾದೇಶಿಕ ಪಕ್ಷದ ಅವಶ್ಯವಿದೆ. ಇಂದಿನ ಕಾರ್ಯಕ್ರಮದ ಯಶಸ್ಸು ಜನರಿಗೆ ಸಲ್ಲಬೇಕಿದೆ. ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಕೆಂಪು ಕೋಟೆಯಲ್ಲಿ ನಾಡ ಧ್ವಜ ಹಾರಿಸಿದ್ದಾರೆ. ನಾನು ಕಾಂಗ್ರೆಸ್, ಬಿಜೆಪಿ ಮನೆ ಬಾಗಿಲಿಗೆ ಹೊಗೊಲ್ಲ. ನಿಮ್ಮ ಮನೆಯ ಬಾಗಿಲಿಗೆ ನಾನು ಬರುತ್ತೇನೆ. ನನಗೆ ಒಂದು ಅವಕಾಶ ಕೊಡಿ. ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ. ಆರೋಗ್ಯ ಯೋಜನೆಯನ್ನು ನೀಡುತ್ತೇನೆ. ರಾಜ್ಯದ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ. ದೇಶಕ್ಕೆ ಮಾದರಿಯಾಗುವ ರಾಜ್ಯವಾಗಿ ಕರ್ನಾಟಕವನ್ನು ಅಭಿವೃದ್ದಿ ಮಾಡುತ್ತೇನೆ ಎಂದರು.
ಜಾತಿ ರಾಜಕಾರಣ: ವೀರಶೈವ -ಲಿಂಗಾಯತ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ. ಜಾತಿ, ಹಣದ ವ್ಯಾಮೋಹ ಬಿಡಿ. ನಾನು ಯಾವುದೇ ಜಾತಿಗೆ ಮೀಸಲಿಲ್ಲ. ನ್ಯಾಯ ಕೇಳಿದ ರೈತಗೆ ಜೈಲಿಗೆ ಕಳಿಸಿದ ಸರ್ಕಾರ ಇದು. ರೈತರಿ ವಿರುದ್ಧ ಲಾಟಿ ಚಾರ್ಜ್ ಮಾಡಿದ ಇಂತಹ ಸರ್ಕಾರ ನಿಮಗೆ ಬೇಕಾ?. 6ನೇ ವೇತನ ಆಯೋಗ ಜಾರಿಗೆ ಸಿಎಂ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ. ಸರ್ಕಾರಿ ನೌಕರರು ಈ ಕುರಿತು ನಿರ್ಧಾರ ಮಾಡಿ. ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿಸುತ್ತಾರೆ. ಜೆಡಿಎಸ್ ಇಲ್ಲಿದೆ ಅಂತ ನೀವು ತೋರಿಸಿದ್ದೀರಾ. ಇವತ್ತಿನ ಕಾರ್ಯಕ್ರಮ ನೋಡಿ ಸಿದ್ದರಾಮಯ್ಯ ಅವರೇ ಎಂದು ವಾಗ್ದಾಳಿ ನಡೆಸಿದರು.