ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಮನೆಗೆ ಭೇಟಿ ನೀಡಿದ್ದಾರೆ.
ಬೆಳಗ್ಗೆ ಬೆಂಗಳೂರಿನಿಂದ ಪಕ್ಷದ ಕಾರ್ಯಕ್ರಮದ ನಿಮಿತ್ತ ಎಚ್.ಡಿ ದೇವೇಗೌಡರು ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಬಸವರಾಜ ಹೊರಟ್ಟಿ ಅವರ ಮನೆಯಲ್ಲಿ ಉಪಹಾರ ಸೇವನೆ ಮಾಡಿದ್ದಾರೆ. ಬಳಿಕ ಸ್ವಲ್ಪ ಹೊತ್ತು ಕುಳಿತು ಮಾತನಾಡಿದ್ದಾರೆ. ನಂತರ ದೇವೇಗೌಡರು ಬೆಳಗಾವಿಗೆ ಪ್ರಯಾಣ ಬೆಳಸಲಿದ್ದು, ದೇವೇಗೌಡರಿಗೆ ಮಾಜಿ ಶಾಸಕ ಕೋನರೆಡ್ಡಿ ಸಾಥ್ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಹೆಚ್.ಡಿ.ದೇವೇಗೌಡ, ಮುಂದೆ ಬರುವ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನ ಚುರುಕುಗೊಳಿಸಲು ಇಂದು ಹುಬ್ಬಳ್ಳಿಗೆ ಬಂದಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸರಿಯಾದ ಫಲಿತಾಂಶ ಬಂದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದರಿಂದ ಪಕ್ಷ ಸಂಘಟನೆ ಮಾಡಲು ಸಮಯ ಸಿಗುವುದಿಲ್ಲ. ಇದರಿಂದ ನಾನು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಎನ್ಡಿಎ ಹೊರತುಪಡಿಸಿ ಎಲ್ಲಾ ಮುಖಂಡರು ಬೆಂಗಳೂರಿನಲ್ಲಿ ಸೇರಿದ್ದೇವೆ. ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿಗೆ ಇದೆ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಇವೆ. ಲೋಕಸಭಾ ಚುನಾವಣೆ ಮುಂಚೆ ಕೆಲವು ಪಕ್ಷಗಳು ಹೊಂದಾಣಿಕೆ ಆಗಬಹುದು. ಚುನಾವಣಾ ನಂತರವೂ ಹೊಂದಾಣಿಕೆ ಆಗಬಹುದು. ಶಿವಸೇನೆಯ ಬಿಜೆಪಿ ಪಕ್ಷದ ಹೊಂದಾಣಿಕೆ ಮಾಡಿಕೊಳ್ಳುವುದು ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.