ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅಶ್ವಮೇಧ ಯಾಗದ ಕುದುರೆಯನ್ನ ಜೆಡಿಎಸ್ ಕಟ್ಟಿ ಹಾಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ತಾನು ಹೋದ ಕಡೆಯಲೆಲ್ಲಾ ಗೆಲುವು ಸಾಧಿಸುತ್ತೇನೆ ಎಂದುಕೊಂಡಿದ್ದರು. ಗುಜರಾತ್ ಸೇರಿದಂತೆ ರಾಜ್ಯದ ಕೆಲವು ಕಡೆ ಗೆಲುವು ಸಾಧಿಸಿ ಕರ್ನಾಟಕವನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಈ ಹಿಂದೆಯೇ ನಾನು ಮೋದಿ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕುತ್ತೇನೆ ಎಂದು ಹೇಳಿದ್ದೆ. ಅದು ಇಂದು ಸತ್ಯವಾಗಿದೆ. ಇನ್ನು ಮಂಡ್ಯ ಜನತೆಗೆ, ರಾಮನಗರ, ಚನ್ನಪಟ್ಟಣ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಕೊನೆ ಉಸಿರಿರೋವರೆಗೂ ಅವಳಿ ನಗರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ವ್ಯವಸ್ಥೆ ರಕ್ಷಣೆ ಮಾಡುತ್ತಿಲ್ಲ. ಆಪರೇಷನ್ ಕಮಲ ಮಾಡಿದ್ದವರು ಬಿಜೆಪಿ ಅವರು. ಈಗ ಮತ್ತೆ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ. ರಾಜ್ಯದ ಜನತೆ ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಲ್ಲಿ ಎಷ್ಟು ಸ್ಥಾನ ಗೆದ್ದಿದೆ?
ಒಟ್ಟು 38 ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿದೆ. ಮಂಡ್ಯದ ಎಲ್ಲ 7 ಕ್ಷೇತ್ರಗಳನ್ನು ಗೆದ್ದ ಜೆಡಿಎಸ್ ಹಾಸನದ 7 ಕ್ಷೇತ್ರಗಳಲ್ಲಿ 6ನ್ನು ಗೆದ್ದುಕೊಂಡಿದೆ. ರಾಮನಗರದ 4 ಕ್ಷೇತ್ರದಲ್ಲಿ 3ರಲ್ಲಿ ಜಯ ಸಾಧಿಸಿದೆ. ತುಮಕೂರಿನ 11 ಕ್ಷೇತ್ರಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದರೆ, ಮೈಸೂರಿನ 11 ಕ್ಷೇತ್ರಗಳಲ್ಲಿ 5ರಲ್ಲಿ ಜಯ ಸಾಧಿಸಿದೆ. ವಿಜಯ ಪುರ ಮತ್ತು ಬೆಂಗಳೂರಿನಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಯಚೂರು, ಕೋಲಾರ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಬೀದರ್ ನಲ್ಲಿ 1 ಕ್ಷೇತ್ರವನ್ನು ಜೆಡಿಎಸ್ ಗೆದ್ದುಕೊಂಡಿದೆ.