ಸುಮಲತಾ ವಿರುದ್ಧ ‘ಸೌಮ್ಯ ಅಸ್ತ್ರ’ ಪ್ರಯೋಗಕ್ಕೆ ಮುಂದಾದ ಜೆಡಿಎಸ್

Public TV
1 Min Read
sumalatha jds

ಮಂಡ್ಯ: ಚುನಾವಣಾ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ‘ಸೌಮ್ಯ ಅಸ್ತ್ರ’ ಪ್ರಯೋಗಿಸಲು ಮುಂದಾಗಿದೆ. ಈ ಮೂಲಕ ಸುಮಲತಾರನ್ನು ಕಟ್ಟಿಹಾಕಲು ದಳಪತಿಗಳು ಯತ್ನಿಸುತ್ತಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಮಹಿಳಾ ಕಾರ್ಯಕರ್ತರನ್ನು ಬಳಸಿಕೊಳ್ಳಲು ಜೆಡಿಎಸ್ ಚಿಂತಿಸಿದ್ದು, ಸೌಮ್ಯವಾಗಿ ಸುಮಲತಾರ ವಿರುದ್ಧ ರಣತಂತ್ರವನ್ನು ರೂಪಿಸಿದೆ. ಪ್ರಚಾರದಲ್ಲಿ ಸುಮಲತಾರ ಮೇಲೆ ಅನುಕಂಪ ತೋರುತ್ತಲೇ ಜೆಡಿಎಸ್ ಮಹಿಳಾ ಕಾರ್ಯಕರ್ತರು ಪಕ್ಷದ ಪರ ಮತ ಯಾಚಿಸಲಿದ್ದಾರೆ. ಇದೇ ವೇಳೆ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತೆಯರು ಮಹಿಳಾ ಮತದಾರರಿಗೆ ತಿಳಿಸಲಿದ್ದಾರೆ.

sumalatha abhishek

ಮಹಿಳಾ ಮತದಾರರೇ ಟಾರ್ಗೆಟ್..?
ಅನುಕಂಪದ ಆಧಾರದ ಮೇಲೆ ಸುಮಲತಾರನ್ನು ಮತ ಯಾಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು ಜೆಡಿಎಸ್ ಸೆಳೆಯಲು ಪ್ರಯತ್ನಿಸುತ್ತಿದೆ. ಹಾಗಾಗಿ ಸುಮಲತಾ ವಿರುದ್ಧ ಪ್ರಚಾರಕ್ಕೆ ಮಹಿಳಾಮಣಿಗಳನ್ನೇ ನಿಯೋಜಿಸಲು ಜೆಡಿಎಸ್ ಅಣಿಯಾಗಿದೆ. ಬಹುತೇಕ ಪಕ್ಷೇತರರಾಗಿ ಅಖಾಡಕ್ಕಿಳಿಯುತ್ತಿರೋ ಸುಮಲತಾ ಅವರಿಗೆ ಅಂಬಿ ಅಭಿಮಾನವೇ ಬಂಡವಾಳ ಇದನ್ನು ಅರಿತಿರುವ ಜೆಡಿಎಸ್, ಅಂಬರೀಶ್ ಅಭಿಮಾನಿಗಳನ್ನ ತೆಕ್ಕೆಗೆ ಪಡೆಯಲು ತನ್ನ ಕಾರ್ಯತಂತ್ರ ಬದಲಿಸಿಕೊಂಡಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸ್ತಾ ಇರೋ ಸುಮಲತಾ ಇಂದು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *