ಮಂಡ್ಯ: ನೇರವಾಗಿ ನಾನು ಸುಮಲತಾರನ್ನು ಬೆಂಬಲಿಸುತ್ತೇನೆ ಅಂದಿದ್ದರೆ ಗಂಡಸ್ಥನ ಅನ್ನಬಹುದಿತ್ತು. ಆದ್ರೆ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೆಂಗಸನ್ನು ಮುಂದೆ ಬಿಟ್ಟುಕೊಂಡು ಕಳ್ಳತನದಲ್ಲಿ ಸಪೋರ್ಟ್ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ಮಾಜಿ ಸಂಸದೆ ರಮ್ಯಾ ಅವರನ್ನು ಅಭ್ಯರ್ಥಿ ಮಾಡಿದ್ದು ನಾನೇ. ಅವರಿಗೆ ಓಪನ್ ಆಗಿ ನಾನು ಬೆಂಬಲ ನೀಡಿದ್ದೆ. ನಾನು ಗಂಡಸು ನೇರವಾಗಿ ಸರ್ಪೋಟ್ ಮಾಡಿದೆ. ಆದರೆ ಇವರ ಹಾಗೇ ಹೆಂಗಸನ್ನು ಮುಂದೆ ಬಿಟ್ಟುಕೊಂಡು ಕಳ್ಳತನದಲ್ಲಿ ಸಪೋರ್ಟ್ ಮಾಡಿಲ್ಲ. ನಾನೇನು ಅಲ್ಲಿ ಶಿಖಂಡಿತನ ಮಾಡಿಲ್ಲ ಎಂದು ಮತ್ತೊಮ್ಮೆ ಚಲುವರಾಯಸ್ವಾಮಿ ವಿರುದ್ಧ ಪರೋಕ್ಷವಾಗಿ ಸುರೇಶ್ಗೌಡ ಹರಿಹಾಯ್ದರು.
ನನಗೆ ಆತನನ್ನು ಕಂಡರೆ ದ್ವೇಷ. ಆತ ಒಬ್ಬ ದುಷ್ಟ. ನನಗೆ ಕೊಡಬಾರದ ತೊಂದರೆ ಕೊಟ್ಟಿದ್ದಾನೆ. ಹೀಗಾಗಿ ಆತನನ್ನು ದ್ವೇಷ ಮಾಡುತ್ತೇನೆ. ಅವರ ಹೈ ಕಮಾಂಡ್ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧರಾಗಿರಬೇಕು. ಇಲ್ಲದಿದ್ದರೆ ಪಕ್ಷ ಬಿಟ್ಟು ಆಚೆ ಹೋಗಬೇಕು ಎಂದರು.
ಸುಮಲತಾರನ್ನ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಕಳುಹಿಸಿದವರು ಯಾರು? ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಮೀಟಿಂಗ್ ಮಾಡಿದ್ದು ಯಾರು? ಇದೆಲ್ಲ ಸುಳ್ಳಾ? ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನ ಪಟ್ಟಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ. ಯಾಕೆ ಸುಳ್ಳು ಹೇಳುತ್ತೀರ? ಇದೆಲ್ಲಾ ರಾಜಕೀಯ ವ್ಯಭಿಚಾರಿಗಳು ಮಾಡುವ ಕೆಲಸ ಎಂದು ಟಾಂಗ್ ಕೊಟ್ಟರು.
ಜನರು ಆಯ್ಕೆ ಮಾಡಿ ಅಧಿಕಾರ ಕೊಟ್ಟಿದ್ದಾರೆ. ಅಧಿಕಾರದಲ್ಲಿ 5 ವರ್ಷ ಇರು. ಅವಧಿ ಮುದಿಗ ಮೇಲೆ ಮತ್ತೆ ಆಯ್ಕೆಯಾದರೆ ಆಡಳಿತ ಮಾಡು. ಕಾಂಗ್ರೆಸ್ನಲ್ಲಿ ಮಾದೇಗೌಡರು ಇದ್ದಾರೆ ಅವರಿಗೆ ನಾವು ಅನ್ಯಾಯ ಮಾಡಿಲ್ಲ. ಅನೇಕ ಕಾಂಗ್ರೆಸ್ ನಾಯಕರು, ಜಿಲ್ಲಾ ಅಧ್ಯಕ್ಷರು ನಮಗೆ ಬೆಂಬಲ ನೀಡಿದ್ದಾರೆ ಅವರಿಗೆ ನಾವು ಅನ್ಯಾಯ ಮಾಡಿಲ್ಲ. ನಮಗೆ ಬೆಂಬಲ ನೀಡಿದವರು ನಮ್ಮ ಮೇಲೆ ಆಪಾದನೆ ಮಾಡಿಲ್ಲ. ಇನ್ನೂ ಇವ್ಯಾವುದೋ ಚಂಗಲುಗಳು ನಮ್ಮ ವಿರುದ್ಧ ಆಪಾದನೆ ಮಾಡಿದರೆ ನಾವು ತಲೆ ಕೆಡಿಸಿಕಳ್ಳುವುದಿಲ್ಲ ಎಂದರು.
ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ರೀತಿ ಚಲುವರಾಯಸ್ವಾಮಿ ಮಾತನಾಡುತ್ತಾರೆ. ರಾಜಕೀಯ ಹಾದರವನ್ನು ಯಾರು ಮಾಡುತ್ತಿದ್ದಾರೆ ಜಗತ್ತಿಗೆ ಗೊತ್ತು. ಲಂಚಕೋರ, ನೈತಿಕತೆ ಇಲ್ಲದ ಮನುಷ್ಯ. ನೇರವಾಗಿ ಹೋರಾಡಿ ಗೊತ್ತಿಲ್ಲದವರ ಬಳಿ ಸಿಎಂ ಕುಮಾರಸ್ವಾಮಿ ಅವರು ಟ್ಯೂಷನ್ ಪಡೆಯಬೇಕಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.