ಬೆಂಗಳೂರು: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡಬೇಕಾದರೆ ಯಡಿಯೂರಪ್ಪನವರ ಕಾಲು ಹಿಡಿಯಬೇಕೇ ಎಂಬ ಪ್ರಶ್ನೆಯನ್ನು ಜೆಡಿಎಸ್ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರು ಹಿರಿಯ ನಟಿ ಡಾ.ಲೀಲಾವತಿ ಮುಂದೆ ನಗುತ್ತಲೇ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಚೌಡಸಂದ್ರ ಹಾಗೂ ಬಿದನಪಾಳ್ಯ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಪ್ರಸಂಗ ನಡೆದಿದೆ.
ಈ ಬಗ್ಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಈಗಾಗಲೇ ಸಾಕಷ್ಟು ಕಾಮಗಾರಿಯ ಹಣವನ್ನು ವಾಪಸ್ ತೆಗೆದುಕೊಂಡಿದ್ದರು. ನಾನು ಹೋಗಿ ಕಾಲು ಹಿಡಿದುಕೊಂಡೆ, ಇಲ್ಲಾಂದ್ರೆ ಒದ್ದು ಬಿಡುವಂತ ಜನ ಅವರು. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಜನರು ನಮ್ಮನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಿಂದಿನ ಸರ್ಕಾರದಲ್ಲಿ ಬಿಡುಗಡೆಯಾದ ಎಲ್ಲ ಕಾಮಗಾರಿಯ ಹಣವನ್ನು ಈಗಾಗಲೇ ವಾಪಸ್ ಪಡೆದಿದ್ದು ಸರಿಯಲ್ಲ. ಕೂಡಲೇ ಶಾಸಕರ ಅನುದಾನವನ್ನು ತಾರತಮ್ಯ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಹಿರಿಯ ನಟಿ ಡಾ. ಲೀಲಾವತಿ ಮಾತನಾಡಿ, ನಮ್ಮ ಹಳ್ಳಿ ಜನರ ರಕ್ಷಣೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಕಾಮಗಾರಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದು ಇಂದಿಗೆ ಸಾರ್ಥಕವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ, ಡಾ.ಲೀಲಾವತಿ, ನಟ ವಿನೋದ್ ರಾಜ್, ಹೇಮಂತ್ ಕುಮಾರ್, ಸಂಪತ್ ಕುಮಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ರಂಗನಾಥ್, ಮಾಜಿ ಸೈನಿಕ ಮೂರ್ತಿ, ವೆಂಕಟೇಶ, ಮತ್ತಿತರ ಮುಖಂಡರು ಹಾಜರಿದ್ದರು.