ಯಾದಗಿರಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನ ಬಹಿರಂಗವಾಗಿ ವಿರೋಧಿಸಿದ್ದ ಯಾದಗಿರಿಯ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು (Sharanagouda Kandkur) ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ (H.D.Kumaraswamy) ವಿರುದ್ದ ಮೌನ ಮುರಿದು ತಮ್ಮ ಅಸಮಾಧಾನ ಮುಂದುವರಿಸಿದ್ದಾರೆ.
ಜ.28ರಂದು ಶಾಸಕ ಶರಣಗೌಡ ಕಂದಕೂರು ಅವರ ತಂದೆ, ಮಾಜಿ ಶಾಸಕ ನಾಗನಗೌಡ ಕಂದಕೂರು ಅವರು ನಿಧನರಾಗಿದ್ದರು. ನಾಗನಗೌಡ ಕಂದಕೂರು ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿರಲಿಲ್ಲ. ಇದನ್ನೂ ಓದಿ: ಬೆಂಗಳೂರಿಗೆ ಸುರಂಗನೂ ಬೇಡ, ಫ್ಲೈಓವರ್ ಬೇಡ.. ಮೊದಲು ನೀರು ಕೊಡಿ: ಎಸ್.ಆರ್.ವಿಶ್ವನಾಥ್
ಇದೇ ವಿಚಾರವಾಗಿ ಮೌನ ಮುರಿದಿರುವ ಶಾಸಕ ಶರಣಗೌಡ ಕಂದಕೂರು, ನಮ್ಮ ತಂದೆಯವ್ರು ನಿಧನರಾಗಿ 20 ದಿನಗಳು ಆದ್ಮೇಲೆ ಕುಮಾರಸ್ವಾಮಿ ಅವ್ರು ಪೋನ್ ಮಾಡಿದ್ರು. ಬಂದು ಭೇಟಿಯಾಗಿ ಬ್ರದರ್ ಅಂದ್ರು. ಬರ್ತೀನಿ ಸರ್ ಅಂತಾ ಹೇಳಿದ್ದೀನಿ. ನಿಖಿಲ್ ಕುಮಾರಸ್ವಾಮಿ ಅವ್ರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ರಾಜಕೀಯ ಹೊರತು ಆತ್ಮೀಯ ಸ್ನೇಹಿತರು, ಸಹೋದರತೆ ಮನೋಭಾವದಿಂದ ನಿಖಿಲ್ ಅವ್ರ ಜೊತೆ ಇದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ತಂದೆಯವರ ಅಂತಿಮ ಯಾತ್ರೆಯಲ್ಲಿ ಕುಮಾರಸ್ವಾಮಿ ಅವ್ರು ಯಾಕೆ ಭಾಗವಹಿಸಿಲ್ಲ ಅಂತಾ ಅವರನ್ನೇ ಕೇಳಬೇಕು. ನಮ್ಮ ತಂದೆ ನಾಗನಗೌಡ ಹಾಗೂ ನಮ್ಮ ಇಡೀ ಕುಟುಂಬ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಜೀವನವನ್ನೇ ಸವೆಸಿದ್ದೇವೆ. ಕಾಲಾಯ ತಸ್ಮೈ ನಮಃ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಇದಕ್ಕೆ ಖಂಡಿತವಾಗಿ ಕಾಲ ಉತ್ತರ ನೀಡುತ್ತೆ. ಆ ಸಮಯ ಬಂದಾಗ ನಾನು ಉತ್ತರ ಕೊಟ್ಟೆ ಕೊಡುತ್ತೇನೆ ಎಂದು ಮಾಜಿ ಸಿಎಂಗೆ ಮಾರ್ಮಿಕವಾಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರದ ಅನ್ಯಾಯಕ್ಕೆ ಬಿಜೆಪಿ ಸಹಕಾರ, ಕನ್ನಡಿಗರಿಗೆ ಮಾಡುವ ದ್ರೋಹ: ಸಿಎಂ ಸಿದ್ದರಾಮಯ್ಯ