ಬೆಂಗಳೂರು: ದೇವನಹಳ್ಳಿ ಕ್ಷೇತ್ರಕ್ಕೆ ದಿಢೀರ್ ರಾಜೀನಾಮೆ ನೀಡಿದ್ದ ಶಾಸಕ ಪಿಳ್ಳಮುನಿಶಾಮಪ್ಪ ಇದೀಗ ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆದಿದ್ದಾರೆ.
ಶಾಸಕ ಮುನಿಶಾಮಪ್ಪ ರಾಜೀನಾಮೆ ಪತ್ರ ಸಲ್ಲಿಸುತ್ತಿದ್ದಂತೆಯೇ ಗುರುವಾರ ಜೆಡಿಎಸ್ ವರಿಷ್ಠ ದೇವೇಗೌಡರು ಶಾಸಕರ ಮನೆಗೆ ತೆರಳಿ ರಾಜೀನಾಮೆಯನ್ನು ವಾಪಾಸ್ ಪಡೆಯುವಂತೆ ಹೇಳಿ ಮನವೊಲಿಕೆ ಮಾಡಿದ್ದಾರೆ.
ಅಂತೆಯೇ ರಾಜೀನಾಮೆ ವಾಪಾಸ್ ಪಡೆದ ಮುನಿಶಾಮಪ್ಪ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ದೇವನಹಳ್ಳಿ ಕ್ಷೇತ್ರಕ್ಕೆ ನನಗೇ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಹೀಗಾಗಿ ಇವತ್ತು ರಾಜೀನಾಮೆ ವಾಪಸ್ ಪಡೆದಿದ್ದೇನೆ. ಪಕ್ಷ ಬಿಡಲ್ಲ, ರಾಜೀನಾಮೆ ಕೊಟ್ಟಿದ್ರೂ ನಾನು ಬೇರೆ ಪಕ್ಷ ಸೇರುವ ಬಗ್ಗೆ ನಿರ್ಧಾರ ತಗೆದುಕೊಂಡಿರಲಿಲ್ಲ. ಜೆಡಿಎಸ್ನಲ್ಲೇ ರಾಜಕೀಯ ಮುಂದುವರಿಸ್ತೇನೆ ಅಂತಾ ಹೇಳಿದ್ದಾರೆ.
ಗುರುವಾರವಷ್ಟೇ ಸ್ಪೀಕರ್ ಕೋಳಿವಾಡ ಅವರಿಗೆ ಶಾಸಕರು ರಾಜೀನಾಮೆ ಪತ್ರ ಸಲ್ಲಿಸಿದ್ದು, ರಾಜೀನಾಮೆ ಪತ್ರದಲ್ಲಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ನಿಸರ್ಗ ನಾರಾಯಣಸ್ವಾಮಿ ಪಕ್ಷ ಸೇರ್ಪಡೆಗೆ ಬೇಸರಗೊಂಡು ರಾಜೀನಾಮೆ ನೀಡಿದ್ದರು ಅಂತಾನೂ ಹೇಳಲಾಗಿತ್ತು.