– ಕಾಂಗ್ರೆಸ್ ಜೊತೆಗೆ ಮೈತ್ರಿಯೇ ಬೇಡ
ತುಮಕೂರು: ರಾಜಣ್ಣ ನೀನೊಬ್ಬನೇ ಗಂಡಸಲ್ಲ, ತಾಕತ್ತಿದ್ದರೆ ಬಹಿರಂಗವಾಗಿ ಯುದ್ಧ ಮಾಡೋಣ ಬಾ ಎಂದು ಜೆಡಿಎಸ್ ಶಾಸಕ ಗೌರಿಶಂಕರ್, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.
ನಗರದಲ್ಲಿ ಇಂದು ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ ಶಾಸಕರು, ರಾಜಕಾರಣದಲ್ಲಿ ಕೆ.ಎನ್.ರಾಜಣ್ಣ ಅವರು ಜಾತಿಯನ್ನು ಪ್ರಸ್ತಾಪಿಸುತ್ತಾರೆ. 2008ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನನ್ನನ್ನು ಗೋಲಿ ಆಡುವ ಹುಡುಗ ಎಂದು ಗೇಲಿ ಮಾಡಿದ್ದರು. ಆದರೆ ನಾನು ನಿಮ್ಮನ್ನು ಸೋಲಿಸಿ ಮನೆಗೆ ಕಳುಹಿಸಿದೆ. ಮಾತನಾಡುವಾಗ ಯೋಚನೆ ಮಾಡಿ ರಾಜಣ್ಣ ಅವರೇ ಎಂದು ಗುಡುಗಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇಲ್ಲದೇ ಇದ್ದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತಿದ್ದರು. ಸಿಎಂ ಕುಮಾರಸ್ವಾಮಿ, ದೇವೇಗೌಡರು ನನ್ನ ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ. ಈ ಮೈತ್ರಿ ಸಹವಾಸ ನಮಗೆ ಬೇಡ ಎಂದು ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಅಲ್ಲಿ ಆಪರೇಷನ್, ಅವರು ಗೋವಾಗೆ ಹೋದರು, ದೆಹಲಿಗೆ ಹೋದರು, ಸರ್ಕಾರ ಬಿದ್ದೊಯ್ತು ಎಂದು ಕೇಳುವುದೇ ಆಗಿದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಎಚ್.ಡಿ.ದೇವೇಗೌಡ ಅವರು ತುಮಕೂರಿನಲ್ಲಿ ಸೋತರು ಎಂದು ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದರು.