ಮೈಸೂರು: ಇಂದಿನಿಂದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಕಾಂಗ್ರೆಸ್ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಪ್ರಚಾರದ ವೇಳೆ ಸ್ಥಳಿಯ ಜೆಡಿಎಸ್ ನಾಯಕರನ್ನು ಕಡೆಗಣಿಸಿದ್ದು, ದೋಸ್ತಿಗಳ ಕುಸ್ತಿ ಮುಂದುವರಿದಿರುವಂತೆ ಕಾಣುತ್ತಿದೆ.
ನಗರ ಮತ್ತು ಜಿಲ್ಲಾ ಕಾಂಗ್ರೆಸ್ನ ಅಧಿಕೃತ ಪ್ರವಾಸದ ಭಿತ್ತಿ ಪತ್ರದಲ್ಲಿ ಜೆಡಿಎಸ್ ಸ್ಥಳಿಯ ನಾಯಕರ ಫೋಟೋಗಳನ್ನು ಕಡೆಗಣಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಫೋಟೋ ಬಿಟ್ಟರೆ ಕರಪತ್ರದಲ್ಲಿ ಸ್ಥಳೀಯ ಜೆಡಿಎಸ್ ನಾಯಕರ ಫೋಟೋ ಹಾಕಿಲ್ಲ. ಮೈಸೂರು ಉಸ್ತುವಾರಿ ಸಚಿವರ ಜಿ.ಟಿ ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಫೋಟೋಗೆ ಕೊಕ್ ನೀಡಲಾಗಿದೆ.
ಪ್ರಚಾರದ ಕರಪತ್ರದಲ್ಲಿ ಕೈ ತೆನೆ ಚಿಹ್ನೆಗಳು ಮಾತ್ರ ಪ್ರಚಾರಕ್ಕೆ ಬಳಕೆ ಮಾಡಿಕೊಂಡು, ಪ್ರಕಟಣೆಯಲ್ಲಿ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಸಮಿತಿ ಎಂದು ಉಲ್ಲೇಖಿಸಲಾಗಿದೆ. ಜೆಡಿಎಸ್ ನಾಯಕರು ನೀಡುತ್ತಿರುವ ಅಸಹಕಾರಕ್ಕೆ ಬೇಸತ್ತು ಮೈತ್ರಿ ನಾಯಕರನ್ನೇ ಕಾಂಗ್ರೆಸ್ ಕೈ ಬಿಟ್ಟಿದಿಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಇರುವ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶವನ್ನು ಆಯೋಜಿಸಿವೆ. ಈ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ. ಸದ್ಯ ಈ ಎರಡು ವಿಚಾರ ಮೈತ್ರಿ ಪಕ್ಷದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.