ಬೆಂಗಳೂರು: ನಾನೇ ಪ್ರಧಾನಿ, ನಂದೇ ಪಕ್ಷ ಎಂದು ಇಂದಿರಾ ಗಾಂಧಿಯವರು ವರ್ತಿಸಿದ್ದರು. ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ತಿಸುತ್ತಿದ್ದಾರೆ ಎಂದು ಶಾಸಕ ವೈಎಸ್ವಿ ದತ್ತಾ ಹೇಳಿದ್ದಾರೆ.
ಇದು ಅಹಂಕಾರದ ಪರಮಾವಧಿ. ಒಂದೇ ದೇಶ ಒಂದೇ ಮೋದಿ ಎನ್ನುವ ಕಾಲ ಬರುತ್ತೆ ಎಚ್ಚರ. ಈಗ ಆಹಾರದ ಮೇಲೆ ತುರ್ತು ಪರಿಸ್ಥಿತಿ ಇದೆ. ಮುಂದೆ ರಾಜಕೀಯದ ಮೇಲೆ ತುರ್ತು ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ದೇವೇಗೌಡರ ಆತ್ಮಚರಿತ್ರೆಯ ಟ್ರೇಲರ್ ಇವತ್ತು ಬಿಡುಗಡೆ ಮಾಡಲು ತಿಳಿಸಿದ್ದೆ. ಆದರೆ ನವೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾಗಲಿದೆ. ಈ ಆತ್ಮಚರಿತ್ರೆಯು ಬರಿ ದೇವೇಗೌಡರ ಆತ್ಮಚರಿತ್ರೆ ಅಲ್ಲ, ಇತಿಹಾಸ ಬರೆಯುವವರಿಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.
ಇನ್ನೂ ನಾಳೆ ನಾಡಿದ್ದರಲ್ಲಿ ಸ್ಫೋಟಕ ಮಾಹಿತಿಗಳ ನೈಜ ಚಿತ್ರಣಗಳು ಹಾಗೂ ರಾಜಕಾರಣಿಗಳ ಬಂಡವಾಳ ಹೊರಗೆ ಬರುತ್ತಿದೆ ಅದನ್ನು ನೋಡೋಣ. ಯುವಕರು ಫ್ಲೆಕ್ಸ್ ಬ್ಯಾನರ್ಗಿಂತ ಪಾದಯಾತ್ರೆಗೆ ಮುಂದಾಗಬೇಕು. ಪಾದಯಾತ್ರೆ ಅದ್ಭುತವಾದ ಪ್ರಯೋಗ, ಫೇಸ್ಬುಕ್ ವಾಟ್ಸಪ್ ಜೊತೆಗೆ ನಿಮ್ಮ ಕಾಲಿಗೂ ಕೆಲಸ ಕೊಡಿ ಎಂದು ದತ್ತಾ ಯುವಕರಿಗೆ ಕರೆ ನೀಡಿದರು.