ಮೈಸೂರು: ಕೋಳಿ ಜಗಳಕ್ಕೆ ಕಾಂಗ್ರೆಸ್ನ ಇಬ್ಬರು ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗುರುವಾರ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದಾರೆ.
ಮೈಸೂರು ತಾಲೂಕು ಬೋರೆ ಆನಂದೂರು ಗ್ರಾಮದ ಮಂಜುನಾಥ್ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲ್ಲೆ ಮಾಡಿದ ಬಳಿಕ ಆರೋಪಿಗಳಾದ ಪುನೀತ್ ಮತ್ತು ನಾರಾಯಣ್ ನಾಪತ್ತೆಯಾಗಿದ್ದಾರೆ.
ಏನಿದು ಘಟನೆ?
ಮಂಜುನಾಥ್ ಸ್ಥಳೀಯ ಜೆಡಿಎಸ್ ಮುಖಂಡರಾಗಿದ್ದು, ಪುನೀತ್ ಮತ್ತು ನಾರಾಯಣ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಶುಕ್ರವಾರ ಪುನೀತ್ ಮತ್ತು ನಾರಾಯಣ್ ಗ್ರಾಮದಲ್ಲಿ ಕೋಳಿಯೊಂದರ ಮೇಲೆ ಬೈಕ್ ಮೇಲೆ ಹರಿಸಿದ್ದರು. ಈ ವೇಳೆ ಮಂಜುನಾಥ್ ಇಬ್ಬರಿಂದಲೂ ದಂಡ ಕಟ್ಟಿಸಿಕೊಂಡಿದ್ರು.
ಈ ಹಿಂದೆ ಇವರ ನಡುವೆ ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ವೈಷಮ್ಯದ ಹೊಗೆಯಾಡುತ್ತಿತ್ತು. ದಂಡ ಕಟ್ಟಿದ ಬಳಿಕ ಆಕ್ರೋಶಗೊಂಡ ಪುನೀತ್ ಮತ್ತು ನಾರಾಯಣ್ ಮಾರಕಾಸ್ತ್ರಗಳಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡಿದ್ದ ಮಂಜುನಾಥ್ ರನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಾದ ಪುನೀತ್ ಮತ್ತು ನಾರಾಯಣ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.