ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ನಿಖಿಲ್ ಅವರಿಗೆ ಜೆಡಿಎಸ್ನಲ್ಲಿ ದೊಡ್ಡ ಹುದ್ದೆಯನ್ನು ನೀಡಲಾಗುತ್ತದೆ ಎಂದು ವಾರದ ಹಿಂದೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಸುದ್ದಿಗೆ ಪೂರಕ ಎಂಬಂತೆ ನಿಖಿಲ್ ಅವರಿಗೆ ಯುವ ಘಟಕದ ಹೊಣೆಯನ್ನು ನೀಡಿ ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಈ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದಂತೆ ತಾತನ ಕಾಲಿಗೆ ಬಿದ್ದು ನಿಖಿಲ್ ಆಶೀರ್ವಾದ ಪಡೆದುಕೊಂಡರು.
ಎಚ್.ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಸಕಲೇಶಪುರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಮಧು ಬಂಗಾರಪ್ಪ ಅವರನ್ನು ನೇಮಿಸಲಾಗಿದೆ.
ಅಳೆದು ತೂಗಿ ದೇವೇಗೌಡರು ತಮ್ಮ ಜಿಲ್ಲೆಯ ಆಪ್ತ ಶಾಸಕ, ಸಕಲೇಶಪುರದ ಪರಿಶಿಷ್ಟ ಜಾತಿ ಸಮುದಾಯದ ಶಾಸಕ ಎಚ್.ಕೆ.ಕುಮಾರಸ್ವಾಮಿ ನೇಮಕ ಮಾಡಿದ್ದು, ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ಪಕ್ಷ ಸಂಘಟನೆಗಾಗಿ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಸಿದ್ದಾರೆ. ಹಿಂದುಳಿದ ವರ್ಗದ ಮತ ಸೆಳೆಯಲು ಮಧು ಬಂಗಾರಪ್ಪಗೆ ಕಾರ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಯುವ ಘಟಕದ ಕಾರ್ಯಾದರ್ಶಿಯಾಗಿ ಶರಣಗೌಡ ಕಂದಕೂರು ಅವರನ್ನು ನೇಮಕ ಮಾಡಲಾಗಿದೆ.