ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಸದನದಲ್ಲಿ ಏನಾದರು ಗೊಂದಲ ಆದರೆ ಮೈತ್ರಿ ಪಕ್ಷದಲ್ಲಿ ವ್ಯತ್ಯಾಸಗಳು ಕಂಡು ಬಂದರೆ ನೆರವಿಗೆ ಇರಲಿ ಎಂಬ ಕಾರಣಕ್ಕೆ ಸ್ಪೀಕರ್ ಸ್ಥಾನ ತಮಗಿರಲಿ ಎಂದು ಜೆಡಿಎಸ್ ಪಟ್ಟು ಹಿಡಿದಿದೆ ಎನ್ನಲಾಗಿದೆ.
ಸಂಪುಟ ಸ್ಥಾನ ಹಂಚಿಕೆ ಗೊಂದಲದಲ್ಲಿರುವ ಕಾಂಗ್ರೆಸ್ ಗೆ ಸ್ಪೀಕರ್ ಸ್ಥಾನ ಬಿಟ್ಟುಕೊಡಬೇಕೇ ಅಥವಾ ಬೇಡವೇ ಎನ್ನುವ ಹೊಸ ಗೊಂದಲ ಈಗ ಆರಂಭವಾಗಿದೆ.
ಇನ್ನು ಎರಡು ದಿನದ ಒಳಗೆ ನೂತನ ಸ್ಪೀಕರ್ ಪ್ರಮಾಣವಚನ ನಡೆಯಬೇಕಿರುವುದರಿಂದ ಆದಷ್ಟು ಬೇಗ ಸ್ಪೀಕರ್ ಗೊಂದಲ ಬಗೆಹರಿಯಬೇಕಿದೆ. ಆದರೆ ಈಗ ಸಂಪುಟ ಸ್ಥಾನ ಹಂಚಿಕೆ ಗೊಂದಲದಲ್ಲಿರುವ ಕಾಂಗ್ರೆಸ್ಸಿಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಜೆಡಿಎಸ್ ಸ್ಪೀಕರ್ ಹುದ್ದೆ ನಮ್ಮದೆ ಎಂದು ಶಾಸಕರಲ್ಲಿ ಹಿರಿಯರಾದ ಹಾಗೂ ಅನುಭವಿಗಳಾದವರ ಹುಡುಕಾಟದಲ್ಲಿ ತೊಡಗಿದೆ.
ಸರ್ಕಾರ ರಚನೆಯಾದಾಗ 78 ಶಾಸಕರನ್ನು ಹೊಂದಿರುವ ಕಾಂಗ್ರೆಸ್ಗೆ ಸ್ಪೀಕರ್ ಸ್ಥಾನ ಸಿಗಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಸದನದ ಹಿರಿಯ ಸದಸ್ಯರಾದ ಆರ್.ವಿ.ದೇಶಪಾಂಡೆ ಮತ್ತು ರಮೇಶ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಈಗ ಜೆಡಿಎಸ್ ಸ್ಪೀಕರ್ ಸ್ಥಾನಕ್ಕೆ ಪಟ್ಟು ಹಿಡಿದ ಕಾರಣ ಮುಂದೆ ಯಾರು ಸ್ಪೀಕರ್ ಆಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.ಇದನ್ನೂ ಓದಿ:ಮೈತ್ರಿ ಸರ್ಕಾರ ರಚನೆಗೂ ಮುನ್ನವೇ ಕಾಂಗ್ರೆಸ್- ಜೆಡಿಎಸ್ನಲ್ಲಿ ಭಿನ್ನರಾಗ!