ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಉಪಚುನಾವಣೆಯ ರಣ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಪರ ನಿಲ್ಲಬೇಕಿದ್ದ ಜೆಡಿಎಸ್ ಐಕಾನ್ಗಳು ಮಾತ್ರ ಇನ್ನೂ ಪತ್ತೆ ಇಲ್ಲ.
ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಪೈಕಿ ಕೆ.ಆರ್ ಪೇಟೆ ಉಪ ಕಣವೂ ಸಹ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರವನ್ನೇ ರೂಪಿಸುತ್ತಿವೆ. ಈ ಪೈಕಿ ಜೆಡಿಎಸ್ ಮಾತ್ರ ಎಲ್ಲೋ ಒಂದು ಹಿಂದಕ್ಕೆ ಬಿದ್ದ ಹಾಗೆ ಇದೆ.
ಕೆ.ಆರ್ ಪೇಟೆ ಉಪ ಕಣದ ಜೆಡಿಎಸ್ ಅಭ್ಯರ್ಥಿ ಪರ ಸದ್ಯ ಮಾಜಿ ಸಚಿವ ರೇವಣ್ಣ ಪ್ರತಿನಿತ್ಯ ಪ್ರಚಾರದ ಮಾಡುತ್ತಿದ್ದರೆ, ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡ ಪುಟ್ಟರಾಜು ಆಗೊಮ್ಮೆ ಈಗೊಮ್ಮೆ ಮಾತ್ರ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಹೊರತುಪಡಿಸಿ ಜೆಡಿಎಸ್ ಐಕಾನ್ಗಳಾದ ಹೆಚ್.ಡಿ ದೇವೇಗೌಡರು ಮತ್ತು ಹೆಚ್.ಡಿ ಕುಮಾರಸ್ವಾಮಿ ಮಾತ್ರ ಇದುವರೆಗೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.
ಮಂಡ್ಯ ಜಿಲ್ಲೆ ಎಂದರೆ ಸದ್ಯ ದೇವೇಗೌಡ್ರು, ಕುಮಾರಸ್ವಾಮಿ ಎಂಬತಾಗಿತ್ತು. ಅದರಲ್ಲೂ ಕೆ.ಆರ್ ಪೇಟೆ ಕ್ಷೇತ್ರದ ಜನರು ದೊಡ್ಡಗೌಡರು ಮತ್ತು ಕುಮಾರಸ್ವಾಮಿ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದಾರೆ. ಹೀಗಿರುವಾಗ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರ ಪರವಾಗಿ ಪ್ರಚಾರ ಮಾಡಲು ಇದುವರೆಗೂ ಕಾಣಿಸಿಕೊಂಡಿಲ್ಲ. ಇದರಿಂದ ಜನರು ಈ ಇಬ್ಬರು ಜೆಡಿಎಸ್ ಐಕಾನ್ಗಳು ಯಾಕೆ ಇನ್ನೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ಎಂದು ಮಾತಾಡಿಕೊಳ್ಳುತ್ತಿದ್ದಾರೆ.