– ಭೀಮಾ ನದಿ ಪ್ರವಾಹಕ್ಕೆ ಕೊಚ್ಚಿ ಹೋದ ನಿರ್ಮಾಣ ಹಂತದ ಸೇತುವೆ
ಕಲಬುರಗಿ: ಮಳೆ ನಿಂತ್ರೂ ಮಳೆ ಹನಿ ನಿಂತಿಲ್ಲ ಎನ್ನೋ ಮಾತಿನಂತೆ ಸದ್ಯ ಭೀಮಾತೀರದಲ್ಲಿ ಪ್ರವಾಹವೇನೋ ಕಡಿಮೆಯಾಗಿದೆ. ಆದ್ರೆ ಪ್ರವಾಹ ತಂದಿಟ್ಟ ಆತಂಕಗಳು ಮಾತ್ರ ಇನ್ನು ಬೆಂಬಿಡದೇ ಅಲ್ಲಿನ ಅನ್ನದಾತರನ್ನು ಕಾಡುತ್ತಿದೆ. ಇದೀಗ ಜೆಡಿಎಸ್ ನಿಯೋಗವು (JDS delegation) ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಹೀಗೆ ಒಂದೆಡೆ ಕಿತ್ತು ಹೋಗಿರುವ ಸೇತುವೆ ಸ್ಲ್ಯಾಬ್ಗಳು, ಇನ್ನೊಂದೆಡೆ ಮಳೆ ಹೊಡೆತಕ್ಕೆ ಮಣ್ಣು ಪಾಲಾಗಿರೋ ಪಪ್ಪಾಯ ಹಾಗೂ ಕಲ್ಲಂಗಡಿ ಬೆಳೆಗಳು. ಕಲಬುರಗಿ (Kalaburagi) ಜಿಲ್ಲೆ ಜೇವರ್ಗಿಯಲ್ಲಿ ಈ ಬಾರಿ ಸುರಿದ ಭಾರೀ ಮಳೆ ಹಾಗೂ ಭೀಮಾ ಪ್ರವಾಹದಿಂದಾಗಿ ಜಿಲ್ಲೆಯ ಜನರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಈಗಾಗಲೇ ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟರ್ಗಿಂತ ಬೆಳೆ ನಾಶವಾಗಿದೆ. ಇದನ್ನೂ ಓದಿ: ಬಿಗ್ಬಾಸ್ಗೆ ರಿಲೀಫ್| ಜಾಲಿವುಡ್ ಸ್ಟುಡಿಯೋಸ್ ಓಪನ್ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್
ಜೇವರ್ಗಿ ಪಟ್ಟಣದ ರೈತ ವಿಷ್ಣು ಮಹೇಂದ್ರಕರ್ಇ ಲಕ್ಷಾಂತರ ರೂ. ಹಣ ಸಾಲ ಮಾಡಿ, 5 ಎಕ್ರೆ ಜಮೀನಿನಲ್ಲಿ ಪಪ್ಪಾಯ ಹಾಗೂ ಕಲ್ಲಂಗಡಿ ಹಣ್ಣು ಬೆಳೆದಿದ್ದು ಫಲ ಕೈಗೆ ಸಿಗುವ ಮೊದಲೇ ನಾಶವಾಗಿದೆ ಎಂದು ಗೋಳಾಡಿದ್ದಾರೆ.
ಈ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶ ಹಾಗು ಗ್ರಾಮಗಳು ಜಲಾವೃತದ ಜೊತೆಗೆ, ಜೇವರ್ಗಿಯ ನರಿಬೋಳ ಗ್ರಾಮದಿಂದ ಚಿತ್ತಾಪುರದ ಚಾಮನೂರ ಗ್ರಾಮದ ಮಧ್ಯ ಸಂಪರ್ಕ ಕಲ್ಪಿಸಲು ನಿರ್ಮಾಣವಾಗುತ್ತಿದ್ದ ಬೃಹತ್ ಸೇತುವೆಯ ಸಿಮೆಂಟ್ ಸ್ಲ್ಯಾಬ್ ಸಹ ಭೀಮಾ ನದಿ ನೀರಿನ ಹೊಡೆತಕ್ಕೆ ನೀರು ಪಾಲಾಗಿದೆ. ಸುಮಾರು 36 ಬೃಹತ್ ಸಿಮೆಂಟ್ ಸ್ಲ್ಯಾಬ್ಗಳು ಭೀಮಾ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಸೇತುವೆಯ ಕನಸ್ಸು ಕಂಡ ಈ ಎರಡು ತಾಲೂಕಿನ ಜನರ ಆಸೆಗಳಿಗೆ ಭೀಮಾ ಪ್ರವಾಹ ತಣ್ಣೀರೆರೆಚಿದೆ.
ಇನ್ನೂ ಭೀಮಾ ನದಿ ಪ್ರವಾಹದ ಬಗ್ಗೆ ಸಮೀಕ್ಷಾ ವರದಿ ತರಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಸೂಚನೆ ಮೇರೆಗೆ ಜೆಡಿಎಸ್ ನಿಯೋಗ ಸಹ ಇದೀಗ ಕಲಬುರಗಿ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದೆ. ಹೆಚ್ಡಿಡಿ ಮೂಲಕ ಕೇಂದ್ರಕ್ಕೂ ಸಹ ನೆರವಿಗೆ ಮನವಿ ಹಾಕಲು ಜೆಡಿಎಸ್ ಪಕ್ಷ ಮುಂದಾಗಿದೆ..