ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಜೆಡಿಎಸ್ನ ಮೂವರು ಶಾಸಕರ ಅನರ್ಹತೆಗೆ ಕೋರಿ ಜೆಡಿಎಸ್ ನಾಯಕರು ಸ್ಪೀಕರ್ ಅವರಿಗೆ ದೂರು ಕೊಟ್ಟಿದ್ದಾರೆ.
ಜೆಡಿಎಸ್ ಪರ ವಕೀಲರಾದ, ವಕೀಲರ ಸಂಘದ ಅಧ್ಯಕ್ಷ ರಂಗನಾಥ್ ಅವರು ಸ್ಪೀಕರ್ ಕಚೇರಿ ಆಗಮಿಸಿದರು. ಹುಣಸೂರು ಶಾಸಕ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್, ಕೆಆರ್ ಪೇಟೆ ಶಾಸಕ ನಾರಾಯಣ ಗೌಡ ಹಾಗೂ ಮಹಾಲಕ್ಷ್ಮೀ ಲೇಔಟ್ ಗೋಪಾಲಯ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜೆಡಿಎಸ್ ಸ್ಪೀಕರ್ ಅವರಿಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೋನರೆಡ್ಡಿ, ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಹಾಜರಿದ್ದರು.
ಇತ್ತ ಇಂದು ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜೆಡಿಎಸ್ ಸಚಿವರು ಭಾಗವಹಿಸಿದ್ದರು. ದೇವನಹಳ್ಳಿಯ ಗಾಲ್ಫ್ ಶೈರ್ ರೆಸಾರ್ಟಿನಲ್ಲಿ ತಂಗಿದ್ದ ಸಚಿವರು ಸಂಪುಟ ಸಭೆಯ ಬಳಿಕ ಮತ್ತೆ ರೆಸಾರ್ಟಿಗೆ ತೆರಳಿದರು. ಸಿಎಂ ಅವರು ಕೂಡ ಸಂಪುಟ ಸಭೆ ಬಳಿಕ ನೇರ ರೆಸಾರ್ಟಿಗೆ ತೆರಳಿದರು. ಇತ್ತ ಬಂಡಾಯ ಬಾವುಟ ಹಾರಿಸಿ ಮುಂಬೈಗೆ ಹಾರಿದ್ದ ಶಾಸಕರು ಇಂದು ಸಂಜೆ 6 ವೇಳೆಗೆ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.