ರಾಯಚೂರು: ಬಿಜೆಪಿ (BJP) ಶಾಸಕ ಶಿವನಗೌಡ ನಾಯಕ್ರಿಂದ (Shivanagouda Naik) ನನಗೆ ಜೀವ ಬೆದರಿಕೆ ಇದೆ ಎಂದು ದೇವದುರ್ಗದ (Devadurga) ಜೆಡಿಎಸ್ ನಿಯೋಜಿತ ಅಭ್ಯರ್ಥಿ ಕರೆಮ್ಮ ನಾಯಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಜೆಡಿಎಸ್ನಿಂದ (JDS) ಆಯೋಜಿಸಿದ್ದ ಬಂಜಾರ ಸಮಾವೇಶ ಯಶಸ್ವಿಯಾದ ಹಿನ್ನೆಲೆ ಶಿವನಗೌಡ ನಾಯಕ್ ಹಿಂಬಾಲಕರು ಹಲ್ಲೆಗೆ ಯತ್ನಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಕರೆಮ್ಮ ನಾಯಕ್ ಹಾಗೂ ಅವರ ಮಗಳು ಗೌತಮಿ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದ್ದು, ಘಟನೆಯಲ್ಲಿ ಕಾರ್ಯಕರ್ತ ಶಿವಪ್ಪಗೆ ಗಾಯಗಳಾಗಿವೆ. ಈ ಹಿನ್ನೆಲೆ ಈಗಾಗಲೇ ದೇವದುರ್ಗ ಪೊಲೀಸ್ ಠಾಣೆಯಲ್ಲಿ 10 ಜನರ ಮೇಲೆ ದೂರು ದಾಖಲಾಗಿದೆ. ಪ್ರಕರಣ ದಾಖಲಾಗಿದ್ದರು ಕ್ರಮ ಕೈಗೊಳ್ಳದ ಹಿನ್ನೆಲೆ ಪೊಲೀಸರ ವಿರುದ್ಧ ಎಸ್ಪಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಸ್ತೆಗುಂಡಿಗಳಿಂದಾದ ಸಾವನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ: ಕಾಂಗ್ರೆಸ್
ನವೆಂಬರ್ 4ಕ್ಕೆ ಪ್ರಜಾಪ್ರಭುತ್ವ ಉಳಿಸಿ, ಗುಂಡಾಗಿರಿ ತೊಲಗಿಸಿ ಸ್ಲೋಗನ್ ಅಡಿಯಲ್ಲಿ ಶಿವನಗೌಡ ನಾಯಕ್ ವಿರುದ್ಧ ದೇವದುರ್ಗದಲ್ಲಿ ಬೃಹತ್ ಹೋರಾಟ ನಡೆಸಲು ಜೆಡಿಎಸ್ ಸಜ್ಜಾಗಿದೆ. ಜೆಡಿಎಸ್ ವರಿಷ್ಠರು ಸಹ ಹೋರಾಟದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಶಿವನಗೌಡ ನಾಯಕ್ ಮಟ್ಕಾ ಆಡಿಸುವುದು, ಅಕ್ರಮ ಮರಳು ಸಾಗಾಟವನ್ನು ನೇರವಾಗಿಯೇ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡುವ ಶಿವನಗೌಡಗೆ ಅಂತ್ಯ ಕಾಲ ಬಂದಿದೆ ಅಂತ ದೇವದುರ್ಗ ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ಎಕರೆ ಜಮೀನಿದ್ದ ಶಿವನಗೌಡ ನಾಯಕ ಇವತ್ತು 1,000 – 1,500 ಕೋಟಿ ಒಡೆಯನಾಗಿದ್ದಾರೆ. ತಾಕತ್ತಿದ್ದರೆ ಶಿವನಗೌಡ ನಾಯಕ್ ಈ ಬಾರಿ ದೇವದುರ್ಗ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ. ಅವರೇ ಸವಾಲು ಹಾಕಿರುವಂತೆ ಅವರ ಒಂಟಿ ಮೀಸೆ ನೋಡುವುದಕ್ಕೆ ದೇವದುರ್ಗದ ಜನ ತುದಿಗಾಲಲ್ಲಿ ನಿಂತಿದ್ದಾರೆ ಅಂತ ಬುಡ್ಡನಗೌಡ ಹೇಳಿದ್ದಾರೆ. ಇದನ್ನೂ ಓದಿ: ನ.1ರಿಂದ ಕಾರಿನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ