– ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಜೆಡಿಎಸ್, ಬಿಜೆಪಿ ಸದಸ್ಯರು
ಹಾಸನ: ಕೊರೊನಾ ಮೂರನೇ ಅಲೆ ಭೀತಿ ಹಾಸನದಲ್ಲಿ ಹೆಚ್ಚಾಗಿದ್ದರೂ ಕೂಡ, ಇದಕ್ಕಿಂತ ಹೆಚ್ಚಾಗಿ ದೇವೇಗೌಡರ ಫೋಟೋ ವಿಚಾರ ಈಗ ಹಾಸನದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚಿಸಬೇಕಾದ ಜನಪ್ರತಿನಿಧಿಗಳು ಇದೀಗ ಫೋಟೋ ಪಾಲಿಟಿಕ್ಸ್ ವಿಷಯವಾಗಿ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.
ಗುರುವಾರ ಹಾಸನ ನಗರಸಭೆಯಲ್ಲಿ ಕೋವಿಡ್ ವಿಷಯ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲು ಸಾಮಾನ್ಯ ಸಭೆ ಕರೆಯಲಾಗಿತ್ತು. ಹಾಸನ ನಗರಸಭೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಗೆದ್ದಿದ್ದರೂ, ಮೀಸಲಾತಿ ಆಧಾರದ ಮೇಲೆ ಬಿಜೆಪಿ ಸದಸ್ಯ ಅಧ್ಯಕ್ಷರಾಗಿದ್ದಾರೆ. ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿದ್ದ ದೇವೇಗೌಡರ ಫೋಟೋ ತೆಗೆದು ಹಾಕಲಾಗಿದೆ. ಒಬ್ಬ ಮಾಜಿ ಪ್ರಧಾನಿಗೆ ಹೀಗೆ ಅವಮಾನ ಮಾಡಬಹುದಾ ಎಂದು ಸಾಮಾನ್ಯ ಸಭೆ ಆರಂಭವಾದ ತಕ್ಷಣ ಜೆಡಿಎಸ್ ಸದಸ್ಯರು ಆಕ್ರೋಶ ಹೊರ ಹಾಕಲಾರಂಭಿಸಿದರು. ಈ ವಿಚಾರವಾಗಿ ಜೆಡಿಎಸ್, ಬಿಜೆಪಿ ಸದಸ್ಯರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದನ್ನೂ ಓದಿ:ಸೆಪ್ಟೆಂಬರ್ 13 ರಿಂದ 10 ದಿನ ವಿಧಾನಮಂಡಲದ ಅಧಿವೇಶನ
ಜೆಡಿಎಸ್, ಬಿಜೆಪಿ ಸದಸ್ಯರು ಕಿತ್ತಾಡುವ ವೇಳೆ ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೇ ಕೋವಿಡ್ ನಿಯಮ ಗಾಳಿಗೆ ತೂರಿದ್ದು ಕಂಡು ಬಂತು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ, ಬಿಜೆಪಿ ಮುಖಂಡ ಮೋಹನ್, ಕಚೇರಿಗೆ ಬಣ್ಣ ಬಳಿಯುವ ಸಲುವಾಗಿ ಫೋಟೋ ತೆಗೆದಿದ್ದೇವು. ಇದೀಗ ಫೋಟೋ ಹಾಕಲು ಸೂಚಿಸಿದ್ದು, ಸಿಬ್ಬಂದಿ ಫೋಟೋ ಹಾಕುತ್ತಿದ್ದಾರೆ. ಈ ಕುರಿತಂತೆ ಗಲಾಟೆ ಮಾಡದೇ ಸಭೆ ನಡೆಸಲು ಅನುಮತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಕಳೆದ ವಾರ ನಿಯೋಜನೆಯಾಗಿದ್ದ ಹಾಸನ ನಗರಸಭೆ ಸಾಮಾನ್ಯ ಸಭೆ ಕೂಡ ಬಿಜೆಪಿ ಹಾಗೂ ಜೆಡಿಎಸ್ ಜಗಳದಲ್ಲಿ ಮುಂದೂಡಲಾಗಿತ್ತು. ಇದೀಗ ಇಂದು ಆರಂಭವಾದ ಸಾಮಾನ್ಯ ಸಭೆ ಕೂಡ ಗದ್ದಲದ ಗೂಡಾಗಿದೆ. ಕೋವಿಡ್ ಸಮಯದಲ್ಲಿ ಜನರ ಸಮಸ್ಯೆ ಪರ ಚರ್ಚಿಸಬೇಕಾದ ಜನಪ್ರತಿನಿಧಿಗಳು ಮಾತ್ರ, ಪರಸ್ಪರ ಜಗಳವಾಡುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಕಳೆ ಕಿತ್ತು ರೈತರ ಹಿತ ಕಾಪಾಡುತ್ತೇನೆ ಎಂದ ಕೃಷಿ ಸಚಿವೆ