ಬೆಂಗಳೂರು: ಉಪಚುನಾವಣೆ ಕಣಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 10 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ನಾಳೆಯೊಳಗೆ ಉಳಿದ 4 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡೋದಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಮುಂದಿನ ವರ್ಷ ನಡೆಯುವ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಕ್ಷೇತ್ರಕ್ಕೂ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಪ್ರಕಟ ಮಾಡಿದೆ. ಪಟ್ಟಿ ಬಿಡುಗಡೆ ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾವು ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಸಮಾನ ಶತ್ರುಗಳು ಅವರ ವಿರುದ್ಧ ಸ್ಪರ್ಧೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜನರ ಕಷ್ಟ, ರೈತರ ಬೆಳೆ ಪರಿಹಾರ ನನ್ನ ಮುಂದೆ ಇರುವ ವಿಷಯ. ಜನರು ಈ ಚುನಾವಣೆಯಲ್ಲಿ ಸರಿಯಾದ ತೀರ್ಮಾನ ಮಾಡಬೇಕು. ಜನ ಸರಿಯಾದ ತೀರ್ಮಾನ ತೆಗೆದುಕೊಳ್ಳದೇ ಹೋದರೆ ನಾವೇನು ಮಾಡಲು ಸಾಧ್ಯವಿಲ್ಲ. ಜನ ಜಾತಿ ಬಿಟ್ಟು ಮತ ಹಾಕಬೇಕು ಅಂತ ಕುಮಾರಸ್ವಾಮಿ ಮನವಿ ಮಾಡಿದರು.
ಇನ್ನು ಮೂರೂವರೇ ವರ್ಷ ಯಡಿಯೂರಪ್ಪ, ಸಿದ್ದರಾಮಯ್ಯ ತಮ್ಮ ಸ್ಥಾನದಲ್ಲಿ ಸೇಫ್ ಅಂದಿದ್ದ ದೇವೇಗೌಡರ ಮಾತಿಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ದೇವೇಗೌಡರ ರಾಜಕೀಯ ವಿಶ್ಲೇಷಣೆಯಲ್ಲಿ ಹಾಗೇ ಹೇಳಿದ್ದಾರೆ. ಜನರ ಕಷ್ಟಕ್ಕೆ ಸ್ಪಂದಿಸೋರಿಗೆ ನಾವು ಸಹಕಾರ ಕೊಡುತ್ತೇವೆ ಅಂತ ನಾನು ಬೆಳಗಾವಿಯಲ್ಲಿ ಹೇಳಿದ್ದೆ. ದೇವೇಗೌಡರು ಎಲ್ಲೂ ಬಿಜೆಪಿಗೆ ಬೆಂಬಲ ಕೊಡ್ತೀವಿ ಅಂತ ಹೇಳಿಲ್ಲ. ಹೀಗಾಗಿ ದೇವೇಗೌಡರ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಬೇಡಿ ಅಂತ ಮನವಿ ಮಾಡಿದರು.
ಈ ಚುನಾವಣೆಯಲ್ಲಿ ನಮ್ಮ ಮೊದಲ ಟಾರ್ಗೆಟ್ ಅನರ್ಹ ಶಾಸಕರು. 15 ಕ್ಷೇತ್ರಗಳಲ್ಲಿ ಸರ್ಕಾರ ಬೀಳಿಸಿದ ಅನರ್ಹ ಶಾಸಕರೇ ನಮ್ಮ ಗುರಿ. ಅವರನ್ನ ಗೆಲ್ಲದಂತೆ ನೋಡಿಕೊಳ್ಳೋದು. ಅವರನ್ನ ಸೋಲಿಸೋದು ನಮ್ಮ ಪಣ ಅಂತ ಸವಾಲ್ ಹಾಕಿದರು. ಯಡಿಯೂರಪ್ಪ ಕಷ್ಟ ಪಟ್ಟು ಸಿಎಂ ಆಗಿದ್ದಾರೆ. 7 ಸ್ಥಾನ ಬರದೇ ಹೋದ್ರೆ ಅವರ ಸ್ಥಾನವೂ ಇರಲ. ಜೆಡಿಎಸ್ ಪಕ್ಷವನ್ನ ಯಾರು ಮುಗಿಸಲು ಸಾಧ್ಯವಿಲ್ಲ. ಎರಡು ಪಕ್ಷಕ್ಕೆ ನಮ್ಮ ಅವಶ್ಯಕತೆ ಇದೆ. ಡಿಸೆಂಬರ್ 10 ನಂತರ ರಾಜಕೀಯದಲ್ಲಿ ಹೊಸ ಆಟ ಶುರುವಾಗುತ್ತೆ ಎಂದು ಹೇಳುವ ಮೂಲಕ ಹೊಸ ಲೆಕ್ಕಾಚಾರದ ಮಾತುಗಳನ್ನ ಆಡಿದರು.
ಜೆಡಿಎಸ್ ಮೊದಲ ಪಟ್ಟಿ
1. ಯಲ್ಲಾಪುರ- ಶ್ರೀಮತಿ ಚೈತ್ರಾಗೌಡ
2. ಹಿರೇಕೆರೂರು- ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ
3. ರಾಣೆಬೆನ್ನೂರು – ಮಲ್ಲಿಕಾರ್ಜುನ ಹಲಗೇರಿ
4. ವಿಜಯನಗರ – ಎನ್.ಎಂ. ನಬಿ
5. ಚಿಕ್ಕಬಳ್ಳಾಪುರ – ಕೆಪಿ ಬಚ್ಚೇಗೌಡ
6. ಕೆ.ಆರ್.ಪುರಂ- ಸಿ. ಕೃಷ್ಣಮೂರ್ತಿ
7. ಯಶವಂತಪುರ – ಜವರಾಯೇಗೌಡ
8. ಶಿವಾಜಿನಗರ – ತನ್ವೀರ್ ಅಹಮದ್ ವುಲ್ಲಾ
9. ಕೆ.ಆರ್.ಪೇಟೆ – ದೇವರಾಜ್
10. ಹುಣಸೂರು – ಸೋಮಶೇಖರ್
ವಿಧಾನ ಪರಿಷತ್ ಅಭ್ಯರ್ಥಿಗಳು
ಆಗ್ನೇಯ ಪದವೀಧರ ಕ್ಷೇತ್ರ- ಚೌಡರೆಡ್ಡಿ ತೂಪಲ್ಲಿ
ಬೆಂಗಳೂರು ಶಿಕ್ಷಕರ ಕ್ಷೇತ್ರ- ಎಪಿ ರಂಗನಾಥ್
ಪಶ್ಚಿಮ ಪದವೀಧರ ಕ್ಷೇತ್ರ – ಶಿವಶಂಕರ್ ಕಲ್ಲೂರು
ಈಶಾನ್ಯ ಶಿಕ್ಷಕರ ಕ್ಷೇತ್ರ – ತಿಮ್ಮಯ್ಯ ಪುರ್ಲೆ