ಮೈಸೂರು: ನಮ್ಮಲ್ಲೂ ಸ್ಟಾರ್ ಕ್ಯಾಂಪೇನರ್ ಇದ್ದಾರೆ. ರೇವಣ್ಣ, ಪುಟ್ಟರಾಜು, ಜಿಟಿ ದೇವೇಗೌಡ ಸೇರಿದಂತೆ ಹಲವರಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್ಡಿ ದೇವೇಗೌಡ (HD Deve Gowda) ಹೇಳಿದ್ದಾರೆ.
ಪಿರಿಯಾಪಟ್ಟಣದಲ್ಲಿ ಮಾತಾನಾಡಿದ ಅವರು, ರಾಜ್ಯದ ಅವರವರ ಭಾಗದಲ್ಲಿ ಜೆಡಿಎಸ್ (JDS) ಗೆಲುವಿಗೆ ಶ್ರಮಿಸಲಿದ್ದಾರೆ. ಪಕ್ಷದ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ. ಪಂಚರತ್ನ ಯೋಜನೆ ಜನರಿಗೆ ಸಹಕಾರಿ ಆಗಲಿದೆ. ಕೊಟ್ಟ ಮಾತು ಉಳಿಸಿಕೊಂಡಿರುವ ಕುಮಾರಸ್ವಾಮಿ (HD Kumaraswamy) ಬಗ್ಗೆ ಜನರಿಗೆ ವಿಶ್ವಾಸ ಇದೆ. ಜೆಡಿಎಸ್ ಬಹುಮತ ಪಡೆದು ಸ್ವತಂತ್ರ ಸರ್ಕಾರ ರಚನೆ ಮಾಡಲಿದೆ. ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ಚುನಾವಣೆ ಮುಗಿಯುವವರೆಗೂ ಪ್ರತಿದಿನ 3 ಕಡೆ ಪ್ರಚಾರ ಮಾಡುತ್ತೇನೆ. ಒಟ್ಟು 42 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ರಾಜ್ಯದ ಎಲ್ಲಾ ಭಾಗಗಳಿಗೂ ತೆರಳಿ ಪ್ರಚಾರ ಮಾಡುತ್ತೇನೆ. ರಾಯಚೂರು, ವಿಜಯಪುರ ಭಾಗಗಳಿಗೆ ನೀರು ಕೊಟ್ಟಿದ್ದೇನೆ. ಕೇವಲ ಹಳೆ ಮೈಸೂರು ಅನ್ನೋ ಪ್ರಶ್ನೆಯೇ ಇಲ್ಲ. ಎಲ್ಲಾ ಕಡೆ ಹೋಗುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಯ ತದ್ರೂಪಿ ಪಕ್ಷೇತರವಾಗಿ ಸ್ಪರ್ಧೆ – ಮತದಾರರಲ್ಲಿ ಗೊಂದಲ ಸೃಷ್ಟಿ ಯತ್ನದ ಆರೋಪ
ಮುಸ್ಲಿಂ ಮೀಸಲಾತಿ ರದ್ದು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರಿಗೆ ಮೀಸಲಾತಿ ಕೊಟ್ಟವನು ನಾನು ಇಲ್ಲೇ ಇದ್ದೇನೆ. ನಿಮ್ಮ ಮುಂದೆಯೇ ಬದುಕಿದ್ದೇನೆ. ಈದ್ಗಾ ಮೈದಾನ ವಿವಾದ ಬಗೆಹರಿಸಿದ್ದು ನಾನು. ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಟ್ಟಿದ್ದೇನೆ. ಜನಗಳಿಗೆ ಈ ಬಗ್ಗೆ ನೆನಪು ಮಾಡಬೇಕಷ್ಟೇ ಎಂದು ತಿಳಿಸಿದರು.
ಕುಮಾರಸ್ವಾಮಿ ಆರೋಗ್ಯ ಸುಧಾರಣೆ ಆಗಿದೆ. ದಿನಕ್ಕೆ 4-5 ಕಾರ್ಯಕ್ರಮ ಮಾಡುತ್ತಿದ್ದಾರೆ. 75 ವರ್ಷಗಳಲ್ಲಿ ಆಗದ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಇತ್ತೀಚೆಗೆ ಮಾಡಿದ್ದಾರೆ. ಗ್ರಾ.ಪಂ ಮಟ್ಟದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು, ನಿರುದ್ಯೋಗ, ಆರೋಗ್ಯ, ಶಿಕ್ಷಣ, ವಸತಿ ಹೀಗೆ ಹಲವು ವಿಷಯಗಳಲ್ಲಿ ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದಾಗ ಅಡೆತಡೆಯಾಯಿತು. ಆದರೂ ಅವೆಲ್ಲನ್ನು ಮೆಟ್ಟಿನಿಂತು ಉತ್ತಮ ಕೆಲಸ ಮಾಡಿದ್ದಾರೆ. ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಂಪೂರ್ಣ ಅಧಿಕಾರ ಕೊಡಿ ಎಂದು ಹೆಚ್ಡಿಡಿ ರಾಜ್ಯದ ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಮುಂದಿನ ಸಿಎಂ ಸಿ.ಟಿ.ರವಿ ಆಗಲಿ: ಈಶ್ವರಪ್ಪ ಘೋಷಣೆ