– ಜೆಡಿಎಸ್ ಕಾರ್ಯಕರ್ತರಿಂದ ಅಂಬುಲೆನ್ಸ್ ಸಿಬ್ಬಂದಿಗೆ ಸನ್ಮಾನ
ಹಾವೇರಿ: ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಅಂಬುಲೆನ್ಸ್ ಸಿಬ್ಬಂದಿ ಹಾಗೂ ವೈದ್ಯರಿಗೆ ಇಂದು ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಸನ್ಮಾನ ಮಾಡಿ ಗೌರವಿಸಿದರು.
ಜನವರಿ 27ರಂದು ಹಾವೇರಿ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದ ಅಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಲಕ್ಷ್ಮಿ ಎಂಬವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ಮಕ್ಕಳ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿತ್ತು.
ತುರ್ತಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಅವಳಿ ಮಕ್ಕಳನ್ನು ರವಾನೆ ಮಾಡಬೇಕಾಗಿತ್ತು. ಅಂಬುಲೆನ್ಸ್ ಚಾಲಕ ತೌಫಿಕ್ ಪಠಾಣ್ ಮತ್ತು ಕುಮಾರ್ ಇಬ್ಬರು 42 ನಿಮಿಷಗಳಲ್ಲಿ 80 ಕಿ.ಮೀ ತಲುಪಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಇಂದು ತೌಫಿಕ್ ಪಠಾಣ್ ಮತ್ತು ಕುಮಾರ್ ಅಂಬುಲೆನ್ಸ್ ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ್ ನಾಯಕ ಹಾಗೂ ಸಿಬ್ಬಂದಿಗೆ ಜೆಡಿಎಸ್ ಮುಖಂಡರು ಸನ್ಮಾನ ಮಾಡಿ ಗೌರವಿಸಿದರು. ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.