ನವದೆಹಲಿ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ನಿರ್ಗಮನದಿಂದ ತೀವ್ರ ಹಿನ್ನಡೆಯಾಗಿದ್ದ ಇಂಡಿಯಾ ಒಕ್ಕೂಟಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಒಕ್ಕೂಟದ ಮತ್ತೊಂದು ಪ್ರಮುಖ ಪಕ್ಷ ಆರ್ಎಲ್ಡಿ ಎನ್ಡಿಎ (NDA) ಒಕ್ಕೂಟ ಸೇರುವ ಸುಳಿವು ನೀಡಿದ್ದು ಲೋಕಸಭೆ ಚುನಾವಣೆಗೆ (Loksabha Election) ಬಿಜೆಪಿ ಜೊತೆಗೆ ಉತ್ತರ ಪ್ರದೇಶದಲ್ಲಿ ಎರಡು ಸ್ಥಾನಗಳ ಒಪ್ಪಂದ ಮಾಡಿಕೊಂಡಿದೆ.
ಮೂಲಗಳ ಪ್ರಕಾರ, ಮೈತ್ರಿ ಮಾತುಕತೆ ಅಂತಿಮವಾಗಿದ್ದು ಲೋಕಸಭಾ ಸ್ಥಾನಗಳಾದ ಬಾಗ್ಪತ್ ಮತ್ತು ಬಿಜ್ನೋರ್ ಅನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಜೊತೆಗೆ ಒಂದು ರಾಜ್ಯಸಭಾ ಸ್ಥಾನದ ಭರವಸೆಯನ್ನೂ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೆರಡು ಮೂರು ದಿನಗಳಲ್ಲಿ ಮೈತ್ರಿಯ ಅಧಿಕೃತ ಘೋಷಣೆ ಹೊರಬೀಳಲಿದೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಯಂತ್ ಚೌಧರಿ (Jayant Chaudhary) ಅವರ ಆರ್ಎಲ್ಡಿ ಪ್ರಭಾವ ಹೊಂದಿದೆ. ಈ ಮೈತ್ರಿಯಿಂದ ಪ್ರಭಾವಿ ಜಾಟ್ ಸಮುದಾಯದ ನೆಲೆಯಾಗಿರುವ ಈ ಪ್ರದೇಶದಲ್ಲಿ ಬಿಜೆಪಿ ಲಾಭಗಳಿಸುವ ಭರವಸೆ ಹೊಂದಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 16 ಸ್ಥಾನಗಳಲ್ಲಿ ಸೋತಿತ್ತು. ಇದರಲ್ಲಿ ಪಶ್ಚಿಮದಲ್ಲಿ ಏಳು ಸ್ಥಾನಗಳನ್ನು ಸೋತಿತ್ತು ಈ ಹಿನ್ನೆಲೆ ಬಿಜೆಪಿ ಈ ಮೈತ್ರಿ ಮಾಡಿಕೊಂಡಿದೆ. ಇದನ್ನೂ ಓದಿ: ಏಪ್ರಿಲ್ 10ರ ಒಳಗಡೆ ವನ್ಯಜೀವಿ ಅಂಗಾಂಗಗಳ ವಾಪಸ್ ನೀಡಿ – ಸರ್ಕಾರದ ಡೆಡ್ಲೈನ್
ಉತ್ತರ ಪ್ರದೇಶದ (Uttara Pradesh) ಇಂಡಿಯಾ ಒಕ್ಕೂಟದ ನಡುವಿನ ಸೀಟು ಹಂಚಿಕೆಯ ಭಿನ್ನಾಭಿಪ್ರಾಯಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಆದಾಗ್ಯೂ, ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಕಾಂಗ್ರೆಸ್ ಹಿಡಿತದ ಉತ್ತರ ಪ್ರದೇಶದ 16 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಲು ಹೊರಟಿದೆ. ಜನವರಿಯಲ್ಲಿ ಅಖಿಲೇಶ್ ಯಾದವ್ (Akhilesh Yadav) ಅವರು ಆರ್ಎಲ್ಡಿಗೆ ಏಳು ಸ್ಥಾನಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವ ಕ್ಷೇತ್ರಗಳನ್ನು ಹಂಚಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಈ ವಾರದ ಆರಂಭದಲ್ಲಿ ಎನ್ಡಿಎಗೆ ಆರ್ಎಲ್ಡಿ ಸೇರುವ ಮಾತುಕತೆ ಸುದ್ದಿ ಹೊರ ಬೀಳುತ್ತಿದ್ದಂತೆ ಜಯಂತ್ ಚೌಧರಿ ಒಬ್ಬ ವಿದ್ಯಾವಂತ ವ್ಯಕ್ತಿ, ಮತ್ತು ಅವರು ರಾಜಕೀಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರು ರೈತರು ಮತ್ತು ಯುಪಿಯ ಏಳಿಗೆಗಾಗಿ ಹೋರಾಟವನ್ನು ಬಿಡುವುದಿಲ್ಲ ಎಂದು ನಾನು ಭರವಸೆ ಹೊಂದಿದ್ದೇನೆ ಎಂದು ಅಖಿಲೇಶ್ ಯಾದವ್ ಹೇಳಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ಆರ್ಜೆಡಿ ಎನ್ಡಿಎ ಒಕ್ಕೂಟ ಸೇರುವ ಅಂತಿಮ ಘಟ್ಟದಲ್ಲಿದೆ.