ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ವಿಶ್ವದ ಶ್ರೇಷ್ಠ ಹೃದಯ ಕೇಂದ್ರ ಎಂಬ ಗೌರವಕ್ಕೆ ಭಾಜನವಾಗಿದೆ. ಸಂಸ್ಥೆಯ ಸಾಧನೆಯನ್ನು ಗುರುತಿಸಿರುವ ಯುರೋಪಿನ ಹಾರ್ಟ್ ಜರ್ನಲ್ ತನ್ನ ಸಂಚಿಕೆಯಲ್ಲಿ ಕಾರ್ಡಿಯಾಕ್ ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಸಂಸ್ಥೆಯಲ್ಲಿ ಜನರಿಗೆ ಕೈಗೆಟುಕುವ ವೆಚ್ಚದಲ್ಲಿ ಅತ್ಯಾಧುನಿಕ ಹೃದಯ ಆರೈಕೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾತನಾಡಿದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಈ ಗೌರವ ಸಿಕ್ಕಿರುವುದು ನಮ್ಮ ದೇಶಕ್ಕೆ ಒಂದು ಹೆಮ್ಮೆಯ ವಿಚಾರ ಎಂದಿದ್ದಾರೆ.
ಈ ಮೂಲಕ ಇಡೀ ವಿಶ್ವಕ್ಕೆ ಗೊತ್ತಾಗುತ್ತೇ ಭಾರತ ದೇಶದಲ್ಲಿ ಅದರಲ್ಲೂ ಸರ್ಕಾರಿ ಸ್ವಾಮ್ಯದ ಹೃದ್ರೋಗ ಸಂಸ್ಥೆಯಲ್ಲಿ ವಿಶ್ವಗುಣಮಟ್ಟದ ಚಿಕಿತ್ಸೆ ಸಿಗುತ್ತೇ ಅನ್ನೋದು, ಇದು ರಾಜ್ಯ ಸರ್ಕಾರಕ್ಕೂ ಹೆಮ್ಮೆ ತರುವ ವಿಚಾರ. ಜಯದೇವ ಆಸ್ಪತ್ರೆಯಲ್ಲಿ ದಿನವೊಂದಕ್ಕೆ ಬೆಂಗಳೂರು, ಮೈಸೂರು, ಕಲಬುರಗಿ ಸೇರಿ ಸರಿಸುಮಾರು ಎರಡೂವರೆ ಸಾವಿರ ಹೊರಗೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತೆ. ಪ್ರತಿ ದಿನ 100 ರಿಂದ 120 ಆಯಜಿಯೋಗ್ರಾಮ್, ಆಯಜಿಯೋಗ್ರಫಿ, 15 ರಿಂದ 20 ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತಿದೆ. ಜಯದೇವ ಹೃದ್ರೋಗ ಸಂಸ್ಥೆಯೊಂದರಲ್ಲೇ 100 ಜನ ಕಾರ್ಡಿಯೋಲಜಿಸ್ಟ್ಗಳು ಇದ್ದಾರೆ ಎಂದು ಡಾ ಮಂಜುನಾಥ್ ತಿಳಿಸಿದ್ದಾರೆ.
ನಮ್ಮ ಸಂಸ್ಥೆಯ ಸಿಬ್ಬಂದಿಗಳ ಪರಿಶ್ರಮ ಹಾಗೂ ದಾನಿಗಳ ನೆರವಿನಿಂದ ನಮ್ಮ ಸಂಸ್ಥೆ ಇವತ್ತು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಈ ಗೌರವ ಅವರಿಗೆ ಸಲ್ಲಬೇಕು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಡರೋಗಿಗಳಿಗೆ ಜಯದೇವ ಸಂಸ್ಥೆ ಚಿಕಿತ್ಸೆ ನೀಡುತ್ತದೆ. ಆಸ್ಪತ್ರೆಯಲ್ಲಿನ ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಪ್ರಗತಿಯಲ್ಲಿ ಇದೆ ಎಂದು ಹೇಳಿದ್ದಾರೆ.