ಮಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಹುಟ್ಟುಹಬ್ಬಕ್ಕೆ ಕರ್ನಾಟಕ ಕಾಂಗ್ರೆಸ್ ಹೀನಾಯ ಸೋಲಿನ ಉಡುಗೊರೆ ಕೊಟ್ಟರೆ ಕಾಂಗ್ರೆಸ್ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅನಾಥಾಶ್ರಮಗಳಿಗೆ ಫಲವಸ್ತು, ಊಟ ಕೊಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.
ಈ ಬಾರಿ ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯದಿಂದ ನೊಂದು ತನ್ನ ಜನ್ಮ ದಿನಾಚರಣೆ ಮಾಡುವುದಿಲ್ಲ ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಈ ರೀತಿ ಹೆಣ್ಣು ಮಕ್ಕಳ ದೌರ್ಜನ್ಯದಿಂದ ನೊಂದು ಹುಟ್ಟುಹಬ್ಬ ಆಚರಿಸದಿರುವ ಉದಾತ್ತ ಮಹಿಳೆ ಜಗತ್ತಿನಲ್ಲಿಯೇ ಬೇರೆ ಯಾರು ಇರುವುದಿಲ್ಲ ಎಂದು ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಪ್ರತಿ ವರ್ಷ ಸೋನಿಯಾ ಗಾಂಧಿಯ ಹುಟ್ಟುಹಬ್ಬವನ್ನು ವಿವಿಧ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಜನಾರ್ದನ ಪೂಜಾರಿ ಆಚರಿಸುತ್ತಿದ್ದರು. ಅದೇ ರೀತಿ ಈ ವರ್ಷವೂ ನಗರದ ಸಂತ ಅಂತೋನಿಯವರ ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸದ ವೃದ್ಧಾಶ್ರಮ, ಕೋಣಾಜೆಯ ಅಭಯಾಶ್ರಮಗಳಿಗೆ ಹಣ್ಣು-ಹಂಪಲು ನೀಡಿದ್ದಾರೆ. ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಊಟ ಹಾಗೂ ಹಣ್ಣುಹಂಪಲು ನೀಡಿ ಹುಟ್ಟುಹಬ್ಬ ಆಚರಿಸಿದರು.
ಬಳಿಕ ಮಾತನಾಡಿದ ಅವರು, ಬಡವರ ಆಶಯದಂತೆ ಸೋನಿಯಾ ಗಾಂಧಿ ಜನ್ಮ ದಿನವನ್ನು ಈ ಬಾರಿಯೂ ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ. ಪ್ರತಿ ವರ್ಷ ಆಶ್ರಮದಲ್ಲಿರುವ ಬಡವರ ಸಂತೋಷಕ್ಕಾಗಿ ಸೋನಿಯಾ ಗಾಂಧಿಯವರ ಜನ್ಮ ದಿನವನ್ನು ಅವರೊಂದಿಗೆ ಆಚರಿಸುತ್ತೇನೆ. ಅದಕ್ಕಾಗಿ ಬಡವರು ಸದಾ ಅದರ ನಿರೀಕ್ಷೆಯಲ್ಲಿರುತ್ತಾರೆ. ಆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಹುಟ್ಟು ಹಬ್ಬದ ಆಚರಣೆ ಬೇಡ ಎಂದರು, ಹಾಗಾಗಿ ಈ ರೀತಿಯಲ್ಲಿ ಆಚರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅಬ್ದುಲ್ ಸಲೀಂ, ಮನಪಾ ಸದಸ್ಯೆ ಜೆಸಿಂತಾ, ಮಾಜಿ ಮನಪಾ ಸದಸ್ಯೆ ಸಬಿತಾ ಮಿಸ್ಕಿತ್, ದೀಪಕ್ ಪೂಜಾರಿ ಮತ್ತು ಟಿ.ಕೆ ಸುಧೀರ್, ಲಕ್ಷ್ಮೀ ನಾರಾಯಣ, ರಮಾನಂದ ಪೂಜಾರಿ, ನೀರಜ್ ಪಾಲ್, ಮೋಹನ್ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.