ಯಾದಗಿರಿ: ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಕಾಲ ಕೂಡಿ ಬಂದಾಗ ಎಲ್ಲ ವಿಷಯಗಳಿಗೂ ಅರ್ಥ ಬರುತ್ತದೆ ಎಂದು ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ಜಿಲ್ಲೆಯ ಹೆಡಗಿಮುದ್ರಾ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಜನಾರ್ದನ ರೆಡ್ಡಿ, ನನಗೆ ಮೊದಲಿಂದಲೂ ಆಧ್ಯಾತ್ಮಿಕ ಕಡೆ ಒಲವು ಇತ್ತು. ಆದರೆ ಅದನ್ನು ತೋರಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಕೆಲವು ಪರಿಸ್ಥಿತಿಗಳು ಅದನ್ನು ಹೊರ ಹಾಕಿದವು. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರಿಂದ ಮನಶಾಂತಿ ಸಿಗುತ್ತಿದ್ದು, ಇದರಿಂದ ಸಂತೋಷವಾಗಿದ್ದೇನೆ. ಪ್ರತಿಯೊಬ್ಬರಲ್ಲಿ ಬದಲಾವಣೆ ಬರಲೇ ಬೇಕು ಎಂದರು.
ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಕಾಲ ಕೂಡಿ ಬಂದಾಗ ಅದಕ್ಕೆ ಅರ್ಥ ಬರುತ್ತದೆ. ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡುವ ವಿಚಾರ ಪ್ರತಿಕ್ರಿಯಿಸಿ, ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ಶ್ರೀರಾಮುಲುಗೆ ಸೂಕ್ತ ಸ್ಥಾನ ನೀಡುವ ಭರವಸೆ ರಾಜ್ಯ ಜನತೆಗಿದೆ ಎಂದು ಹೇಳಿದರು.