ಕೊಪ್ಪಳ: ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಜನಾರ್ದನ ರೆಡ್ಡಿ (Janardhan Reddy) ಪ್ರಮುಖ ಕಾರಣ. ಅವರು ಹೊಸ ಪಕ್ಷ ಸ್ಥಾಪಿಸಿರುವ ವಿಚಾರ ಮಾಧ್ಯಮದ ಮೂಲಕ ತಿಳಿದಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand Singh) ಹೇಳಿದ್ದಾರೆ.
ಕೊಪ್ಪಳದಲ್ಲಿ (Koppala) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನನ್ನ ಆತ್ಮೀಯ ಸ್ನೇಹಿತರು. ನಾವು ಅವರನ್ನು ಮರೆಯುವುದಿಲ್ಲ. ಕಳೆದ 2008ರಲ್ಲಿ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದಿದ್ದೆ. ಆಗ ಅವರೇ ಧೈರ್ಯ ತುಂಬುವ ಕೆಲಸ ಮಾಡಿದ್ದರು ಎಂದು ಹಳೇ ನೆನಪು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ
ಪ್ರಜಾಪ್ರಭುತ್ವದಲ್ಲಿ ಯಾರಾದರೂ ಪಕ್ಷ ಕಟ್ಟಬಹುದು. ಯಾರು ಬೇಕಾದರೂ ಸ್ಪರ್ಧೆ ಮಾಡುವ ಸ್ವಾತಂತ್ರ್ಯ ಇದೆ. ಈ ಸಂದರ್ಭದಲ್ಲಿ ಅವರಿಗೆ ಶುಭಕೋರಬಹುದು ಅಷ್ಟೇ. ಬದಲಾಗಿ ಬೇರೆ ಏನೂ ಚರ್ಚೆ ಮಾಡುವುದಿಲ್ಲ. ಆದರೆ ಸ್ನೇಹ ಯಾವತ್ತೂ ಇರುತ್ತದೆ ಎಂದು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಮನವೊಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಮನವೊಲಿಸುವಷ್ಟು ದೊಡ್ಡ ವ್ಯಕ್ತಿಯಲ್ಲ. ಇದೆಲ್ಲ ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಅವರಿಗೆಲ್ಲ ಪ್ಲಸ್, ಮೈನಸ್ ಪಾಯಿಂಟ್ಗಳು ಗೊತ್ತಿದೆ. ಮುಂದೆ ರಾಜ್ಯ, ರಾಷ್ಟ್ರ ನಾಯಕರು ಚರ್ಚೆ ಮಾಡಬಹುದು. ಆ ಸಾಲಿನಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?
ಜನಾರ್ದನ ರೆಡ್ಡಿ ಹಿಂದೆ ಬಿಎಸ್ವೈ ಇದ್ದಾರೆ ಎಂಬ ಬಗ್ಗೆ ಮಾತನಾಡಿ, ಅದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ. ಚುನಾವಣೆಗೆ ಅನೇಕ ಪಕ್ಷಗಳು ಬರುತ್ತಿವೆ. ನಮ್ಮ ಪಕ್ಷದವರು ಏನೇನು ಚದುರಂಗ ಆಟ ಆಡಬೇಕೋ ಅದನ್ನ ಆಡ್ತೇವೆ. ಎಷ್ಟೇ ಪಕ್ಷಗಳು ಬಂದರೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನನಗೆ ಜನಾರ್ದನ ರೆಡ್ಡಿ ಜೊತೆ ಈಗಲೂ ಸ್ನೇಹ ಇದೆ. ಸ್ನೇಹದಲ್ಲಿ ಯಾವುದೇ ಬಿರುಕು ಇಲ್ಲ. ಯಾರೇ ಸ್ಪರ್ಧೆ ಮಾಡಿದರೂ ಅವರಿಗೆ ಅಜೆಂಡಾ ಇರಬೇಕು. ಪಕ್ಷಕ್ಕೆ ಹಿನ್ನೆಲೆ ಇರಬೇಕಾಗುತ್ತದೆ. ಪಕ್ಷದ ಹಿನ್ನೆಲೆಯಿಂದ ಜನ ಆಯ್ಕೆ ಮಾಡುತ್ತಾರೆ. ಜನರ ತೀರ್ಮಾನವೇ ಅಂತಿಮ. ಆದರೆ ಜನಾರ್ದನ ರೆಡ್ಡಿ ಪಕ್ಷದಿಂದ ಬಿಜೆಪಿಗೆ ಹಾನಿ ಆಗುವ ಬಗ್ಗೆ ಜನರು ತೀರ್ಮಾನ ತೆಗೆದುಕೊಳ್ಳುತ್ತಾರೆ. 2023 ರಲ್ಲಿ ಮತದಾರರು ಬಿಜೆಪಿ ಆಯ್ಕೆ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.