ಶ್ರೀನಗರ: ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಲಸೆ ಕಾಶ್ಮೀರದ ವಿದ್ಯಾರ್ಥಿಗಳಿಗೆ ಬಕ್ರೀದ್ ಹಬ್ಬಕ್ಕೆ ಉಡುಗೊರೆ ನೀಡಿದ್ದು, ಭದ್ರತೆಯ ಮಧ್ಯೆ ಬಕ್ರೀದ್ ಆಚರಿಸಲು ಮನೆಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಬ್ಬ ಆಯೋಜಿಸಲು ತಲಾ 1 ಲಕ್ಷ ರೂ.ಗಳನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.
ಶ್ರೀನಗರದ ರಾಜಭವನದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಮತ್ತು ಬಕ್ರೀದ್ ಆಚರಣೆ ಮಾಡಲು ಜನರಿಗೆ ಬೇಕಾದ ಅಗತ್ಯ ಮೂಲಭೂತ ಸೇವೆ ಹಾಗೂ ಅಗತ್ಯ ಸರಕುಗಳನ್ನು ನೀಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಾಣಿಕೆ ನೀಡುವ ಮಾಹಿತಿ ನೀಡಿ, ಅಧಿಕಾರಿಗಳನ್ನು ಸಂಪರ್ಕ ಮಾಡಲು ಸೂಚನೆ ನೀಡಿದರು.
ಬಕ್ರೀದ್ ಸಂದರ್ಭದಲ್ಲಿ ಜನರು ಪ್ರಾಣಿಗಳನ್ನು ಖರೀದಿಸಲು ಅನುಕೂಲವಾಗುವಂತೆ ಕಣಿವೆಯ ವಿವಿಧ ಸ್ಥಳಗಳಲ್ಲಿ ಪಡಿತರ ಅಂಗಡಿಗಳು ಮುಕ್ತವಾಗಿರಲು ಅವಶ್ಯಕ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರುವ ವರದಿಗಳಾಗಿಲ್ಲ ಎಂದು ಸ್ಪಷ್ಟಪಡಿಸಿದರು.