ನವದೆಹಲಿ: ಕಾಶ್ಮೀರ ಪುನರ್ ವಿಭಜನೆಯ ಐತಿಹಾಸಿಕ ಕ್ಷಣದ ಕೀರ್ತಿ ಮೋದಿ ಸರ್ಕಾರದ ಮುಕುಟಕ್ಕೆ ಸಂದಿದೆ. ರಾಜ್ಯಸಭೆಯಲ್ಲಿ ಸೋಮವಾರ ಪಾಸ್ ಆಗಿದ್ದ ಕಾಶ್ಮೀರ ಪುನರ್ ವಿಭಜನಾ ವಿಧೇಯಕಕ್ಕೆ ಇಂದು ಲೋಕಸಭೆಯಲ್ಲೂ ಭಾರೀ ಮತಗಳ ಅಂತರದಲ್ಲಿ ಅಂಗೀಕಾರವಾಗಿದೆ.
ಜಮ್ಮು ಮತ್ತು ಕಾಶ್ಮೀರವನ್ನು ವಿಧಾನಸಭೆ ಸಹಿತ ಹಾಗೂ ಲಡಾಖ್ ಪ್ರದೇಶವನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿಸುವ `ಜಮ್ಮು ಕಾಶ್ಮೀರ ಪುನರ್ ರಚನಾ ವಿಧೇಯಕ’ದ ಪರವಾಗಿ 370 ಹಾಗೂ ವಿರುದ್ಧವಾಗಿ 70 ವೋಟ್ಗಳು ಬಿದ್ದಿವೆ.
ಗಮನಾರ್ಹ ಸಂಗತಿ ಎಂದರೆ ಕಾಶ್ಮೀರಕ್ಕಿದ್ದ 370 ವಿಶೇಷ ವಿಧಿಯನ್ನು ಲೋಕಸಭೆಯಲ್ಲಿ ಇಂದು 370 ಮತಗಳಲ್ಲಿ ರದ್ದುಗೊಳಿಸಲಾಗಿದೆ. ಪ್ರಧಾನಿ ಮೋದಿ 2.0 ಅವಧಿಯ 17ನೇ ಲೋಕಸಭೆಯ ಆರಂಭದಲ್ಲೇ ಭರ್ತಿ 26 ಬಿಲ್ಗಳು ಪಾಸ್ ಆಗಿದ್ದು ಅತ್ಯಂತ ಉತ್ಪಾದಕ ಅಧಿವೇಶನ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಮಧ್ಯೆ, ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿ ರದ್ದುಪಡಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಗೌರವ ಸಲ್ಲಿಸಿದರು.
ಇದಕ್ಕೂ ಮುನ್ನ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದರು. ಲೋಕಸಭೆಯಲ್ಲಿ 370ನೇ ವಿಧಿ ರದ್ದು ಹಾಗೂ ಕಾಶ್ಮೀರದ ಪುನಾರಚನೆ ವಿಧೇಯಕ 2019 ಅನ್ನು ಲೋಕಸಭೆಯಲ್ಲಿ ಮಂಡಿಸಿ ಮಾತನಾಡಿದ ಅವರು, ‘ಆರ್ಟಿಕಲ್ 370ಯೂ ಭಾರತ ಮತ್ತು ಕಾಶ್ಮೀರದ ಮಧ್ಯೆ ಗೋಡೆ ಸೃಷ್ಟಿಸಿತ್ತು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡುವಾಗ ಪಾಕ್ ಆಕ್ರಮಿತ ಕಾಶ್ಮೀರವನ್ನೂ ಸೇರಿಸಿಯೇ ಮಾತನಾಡುತ್ತೇನೆ. ಅದಕ್ಕಾಗಿ ನಾನು ಪ್ರಾಣತ್ಯಾಗಕ್ಕೂ ಸಿದ್ಧ’ ಅಂತ ಸ್ಪಷ್ಪಪಡಿಸಿದರು.
ಸಂಜೆ ವಿಧೇಯಕದ ಮೇಲೆ ಉತ್ತರ ನೀಡಿದ್ದ ಅಮಿತ್ ಶಾ, ಈ ಹಿಂದೆ ಆಂಧ್ರಪ್ರದೇಶ ವಿಭಜನೆ ವೇಳೆ ಕಾಂಗ್ರೆಸ್ ಯಾರನ್ನಾದರೂ ಸಂಪರ್ಕಿಸಿತ್ತಾ? ನಮಗೆ ಅವರ ನೀತಿ ಪಾಠ ಬೇಕಿಲ್ಲ ಅಂತ ತಿರುಗೇಟು ನೀಡಿದರು. ಹುರಿಯತ್ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ಅಲ್ಲದೆ, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಿಲ್ಲ ಎಂದರು. ಆದರೆ, ಸದನದಲ್ಲೇ ಅಮಿತ್ ಶಾ ಸುಳ್ಳು ಹೇಳುತ್ತಾರೆ. ಇಂಥಾ ಹಿಂದೂ ಸ್ಥಾನವನ್ನು ನಾನೆಂದು ನೋಡಿಯೇ ಇಲ್ಲ ಅಂತ ಫಾರೂಕ್ ಅಬ್ದುಲ್ಲಾ ಆಕ್ರೋಶ ಹೊರಹಾಕಿದ್ದಾರೆ.
ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಸಂಸತ್ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಭಾರತದ ನಿರ್ಧಾರದಿಂದ ಪುಲ್ವಾಮಾದಂತಹ ಘಟನೆಗಳು ಮರಕಳಿಸುತ್ತವೆ ಎಂದಿದ್ದಾರೆ. ಭಾರತದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರಂತೆ ಕಾಣುತ್ತಿದ್ದು, ಜನಾಂಗೀಯ ನಿಂದನೆ ಆಗುತ್ತಿದೆ ಅಂತ ದೂರಿದ್ದಾರೆ. ಮೋದಿ ಸರ್ಕಾರ ಆರ್ ಎಸ್ಎಸ್ ತತ್ವ ಸಿದ್ಧಾಂತಗಳನ್ನು ಜಾರಿಗೆ ತರಲು ಮುಂದಾಗಿದ್ದು, ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೆಜ್ಜೆ ಇಟ್ಟಂತೆ ಕಾಣುತ್ತಿದೆ ಅಂತ ಆರೋಪಿಸಿದ್ದಾರೆ. ವಿಶ್ವಸಂಸ್ಥೆಗೆ ದೂರು ಕೊಡ್ತೇವೆ. ಅವಕಾಶ ಸಿಗುವ ಎಲ್ಲಾ ವೇದಿಕೆಗಳಲ್ಲೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸ್ತೇವೆ ಅಂತಲೂ ಇಮ್ರಾನ್ ಖಾನ್ ಗುಡುಗಿದ್ದಾರೆ.