ಬೆಂಗಳೂರು: ಶಾಸಕ ಡಾ.ಕೆ ಸುಧಾಕರ್ ಚೆನ್ನೈಗೆ ಹೋಗಿದ್ದು ನಿಜ. ಆದರೆ ಅವರು ಹೊಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿ, ಶನಿವಾರ ರಾತ್ರಿಯೇ ವಾಪಸ್ ಆಗಿದ್ದಾರೆ. ಅವರು ಪಕ್ಷ ಬಿಡುವ ಮಾತೇ ಇಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವ ಜಮೀರ್ ಅವರು ಸುಧಾಕರ್ ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು. ಇಂದು ಬೆಳಗ್ಗೆ ಡಾ.ಕೆ.ಸುಧಾಕರ್ ನಿವಾಸಕ್ಕೆ ಸಚಿವರು ಬಂದು ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸುಧಾಕರ್ ನನ್ನ ಸ್ನೇಹಿತರು. ತಿಂಡಿ ತಿನ್ನಲು ಕರೆದಿದ್ದರು. ಹೀಗಾಗಿ ಬಂದಿದ್ದೇನೆ. ಅವರು ಊಟಕ್ಕೆ ಕರೆದರೂ ಬರುತ್ತೇನೆ ಎಂದರು. ಇದನ್ನು ಓದಿ: ಸಮ್ಮಿಶ್ರ ಸರ್ಕಾರಕ್ಕೀಗ ಸಿದ್ದರಾಮಯ್ಯ ಟ್ರಬಲ್ ಶೂಟರ್!
ಇದೇ ವೇಳೆ ಸುಧಾಕರ್ ಅವರು ದೇವಸ್ಥಾನಕ್ಕೆ ಹೋಗುವುದೇ ತಪ್ಪಾ ಎಂದು ಪ್ರಶ್ನಿಸಿದ ಅವರು, ಸುಧಾಕರ್ ಅವರು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಅವರು ಚೆನ್ನೈ ಪ್ರವಾಸದ ಕುರಿತು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರು ಯಾವುದೇ ಶಾಸಕರಿಗೂ ಫೋನ್ ಮಾಡಿ, ಎಲ್ಲಿ ಇದ್ದಾರೆ ಅಂತ ವಿಚಾರಿಸಿಲ್ಲ ಎಂದು ತಿಳಿಸಿದರು.
ಸಚಿವರ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುಧಾಕರ್ ಅವರು, ನನಗೆ ಬ್ಲಾಕ್ಮೇಲ್ ಮಾಡಲು ಗೊತ್ತಿಲ್ಲ. ಗೊತ್ತಿರುವುದು ಇ-ಮೇಲ್ ಮಾತ್ರ. ನಾನು ಯಾರನ್ನೂ ಹೆದರಿಸುತ್ತಿಲ್ಲ. ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೇರೆ ಪಕ್ಷ ಸೇರುವ ಮಾತೇ ಇಲ್ಲ ಎಂದರು. ಇದನ್ನು ಓದಿ: ನಾನೊಬ್ಬ ಡಾಕ್ಟರ್, ಆಪರೇಷನ್ಗೆ ಒಳಗಾಗುವುದಿಲ್ಲ: ಶಾಸಕ ಸುಧಾಕರ್
ಕೆಲವು ಅಭಿಪ್ರಾಯ ಹಾಗೂ ಭಿನ್ನಾಭಿಪ್ರಾಯಗಳು ರಾಜಕೀಯದಲ್ಲಿ ಇರುವುದು ಸಹಜ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಯಾರು ಉತ್ತಮ ಕೆಲಸ ಮಾಡುತ್ತಾರೋ ಅಂತಹ ನಾಯಕರನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ನಮ್ಮ ಜ್ಞಾನ ಹಾಗೂ ಸಾಮಥ್ರ್ಯವನ್ನು ಹೈಕಮಾಂಡ್ ಗುರುತಿಸಿ, ಸಚಿವ ಸ್ಥಾನ ನೀಡಿದರೆ ಸ್ವಾಗತಾರ್ಹ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv