– ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆರೋಪ
ದಾವಣಗೆರೆ: ಕೇಂದ್ರ ಸರ್ಕಾರ ಪ್ರತಿ ಮನೆಗೂ ನೀರು ತಲುಪಿಸಲು `ಹರ್ ಘರ್ ಜಲ್’ (Har Ghar Jal ) ಎಂಬ ಯೋಜನೆ ಆರಂಭಿಸಿದ್ದು ಇದಕ್ಕಾಗಿ ಕೋಟ್ಯಂತರ ರೂ. ಹಣ ವ್ಯಯಮಾಡಿದೆ. ಈ ಯೋಜನೆಯ ಹಣದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು 81 ಲಕ್ಷ ರೂ. ಲೂಟಿ ಹೊಡೆದ ಆರೋಪ ದಾವಣಗೆರೆಯ (Davanagere) ಅಲೂರು ಹಟ್ಟಿ ಗ್ರಾಮದಲ್ಲಿ ಕೇಳಿಬಂದಿದೆ.
ಈ ಗ್ರಾಮದಲ್ಲಿ ಮನೆ ಮನೆಗೆ ಗಂಗೆ ಯೋಜನೆ ಕಾಮಗಾರಿ ನಡೆದಿದೆ. ಇಲ್ಲಿಯವರೆಗೂ ನೀರು ಒಂದು ದಿನವೂ ಬಂದಿಲ್ಲ. ಕಳಪೆ ಗುಣಮಟ್ಟದ ನಲ್ಲಿಗಳು, ಮೋಟರ್ಗಳನ್ನು ಅಳವಡಿಕೆ ಮಾಡಲಾಗಿದೆ. ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಇವು ಕಿತ್ತು ಬಂದಿವೆ. ಇದನ್ನೂ ಓದಿ: ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ: ಪೇಜಾವರ ಶ್ರೀ
ಈ ಗ್ರಾಮದಲ್ಲಿ 2020-21 ಸಾಲಿನ ಜಲ ಜೀವನ್ ಮಿಷನ್ (Jal Jeevan Mission) ಅಡಿಯಲ್ಲಿ 81 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಗುತ್ತಿಗೆದಾರ ಗುಂಡಗತ್ತಿ ಎಂಬವರಿಗೆ ಟೆಂಡರ್ ಆಗಿ, ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಲಾಗುತ್ತಿಲ್ಲ.
ಸರ್ಕಾರದ ಯೋಜನೆ ಅಂದ್ರೆ ಬಹುತೇಕರಲ್ಲಿ ಇದೇ ರೀತಿ ಅಸಡ್ಡೆ ಇರುತ್ತದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರರ ಮತ್ತು ಅಧಿಕಾರಿಗಳು, ಜನ ಪ್ರತಿನಿಧಿಗಳು ಶಾಮೀಲಾಗಿ ಕೊಳ್ಳೆ ಹೊಡೆದಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಪಟಾಕಿ ಮಳಿಗೆಯಲ್ಲಿ ಅಗ್ನಿ ದುರಂತ – 10ಕ್ಕೂ ಹೆಚ್ಚು ವಾಹನ ಬೆಂಕಿಗಾಹುತಿ