ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (Jaishankar) ಅವರು ನವೆಂಬರ್ 8 ರಂದು ರಷ್ಯಾ (Russia) ಪ್ರವಾಸವನ್ನು ಕೈಗೊಳ್ಳಲಿದ್ದು, ತಮ್ಮ ಸಹವರ್ತಿ ಸರ್ಗೆ ಲಾವ್ರೊವ್ (Sergey Lavrov) ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ದ್ವಿಪಕ್ಷೀಯ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉಕ್ರೇನ್ (Ukraine) ತಮ್ಮ ವಿರುದ್ಧ ದಾಳಿ ನಡೆಸಲು ಡರ್ಟಿ ಬಾಂಬ್ (Dirty Bomb) ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಆಧಾರರಹಿತವಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಬುಧವಾರ ರಷ್ಯಾದಲ್ಲಿ ಪರಮಾಣು ಪಡೆಗಳು ತಾಲೀಮು ನಡೆಸಿರುವುದಾಗಿ ವರದಿಯಾಗಿದೆ. ಇದೀಗ ಜೈಶಂಕರ್ ಅವರ ಮಾಸ್ಕೋ ಭೇಟಿಯ ನಿರ್ಧಾರವನ್ನು ಈ ಎಲ್ಲಾ ಬೆಳವಣಿಗೆಳ ಬೆನ್ನಲ್ಲೇ ಮಾಡಲಾಗಿದೆ. ಇದನ್ನೂ ಓದಿ: ಯೋಗಿ, ಮೋದಿ ವಿರುದ್ಧ ದ್ವೇಷದ ಭಾಷಣ – ಅಜಂ ಖಾನ್ಗೆ 3 ವರ್ಷ ಜೈಲು
ರಷ್ಯಾ ಉಕ್ರೇನ್ನ ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಭೀತಿಯ ನಡುವೆ ಬುಧವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದ ಸಹವರ್ತಿ ಸರ್ಗೆಯ್ ಶೋಯಿಗು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಯುದ್ಧದಲ್ಲಿ ಯಾವುದೇ ಕಡೆಯಿಂದ ಅಣ್ವಸ್ತ್ರಗಳನ್ನು (Nuclear Weapons) ಬಳಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಒಕೆ ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ: ರಾಜನಾಥ್ ಸಿಂಗ್
ಪರಮಾಣು ಅಥವಾ ರೇಡಿಯೋಲಾಜಿಕಲ್ ಶಸ್ತ್ರಾಸ್ತ್ರಗಳ ಬಳಕೆ ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಾಗಿ ಯಾರೊಬ್ಬರೂ ಅಣ್ವಸ್ತ್ರವನ್ನು ಆಶ್ರಯಿಸಬಾರದು ಎಂದು ರಾಜನಾಥ್ ಸಿಂಗ್ ಶೋಯಿಗು ಅವರಿಗೆ ತಿಳಿಸಿದ್ದಾರೆ.