ಬೆಳಗಾವಿ: ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹಾಗೂ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರಿಗೆ ಬೆದರಿಕೆ ಹಾಕಿದ್ದ ಆರೋಪಿ ನ್ಯಾಯಾಲಯದ ಆವರಣದಲ್ಲೇ ಪಾಕಿಸ್ತಾನ ಜಿಂದಾಬಾದ್ (Pakistan Zindabad) ಎಂದು ಘೋಷಣೆ ಕೂಗಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾ ಕೈದಿ ಜಯೇಶ್ ಪೂಜಾರಿಯೇ (Jayesh Poojari) ಅಲಿಯಾಸ್ ಶಾಕೀರ್ ಮೊಹಮ್ಮದ್ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರು ಧರ್ಮದೇಟು ನೀಡಿದ್ದು ಸ್ಥಳದಲ್ಲಿದ್ದ ಪೊಲೀಸರು ಆತನನ್ನು ರಕ್ಷಿಸಿ ಎಪಿಎಂಸಿ ಠಾಣೆಗೆ ಕರೆದೊಯ್ದಿದ್ದಾರೆ.
ಅಲೋಕ್ ಕುಮಾರ್ ಅವರಿಗೆ ಜೈಲಿನಿಂದಲೇ ಕರೆಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಾಣೆಗಾಗಿ ಪೊಲೀಸರು ನ್ಯಾಯಾಲಯಕ್ಕೆ ಕರೆ ತಂದಾಗ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಯ 4ನೇ ಜೆಎಂಎಫ್ಸಿ ಕೋರ್ಟ್ ಹಾಲ್ ಬಳಿಯಲ್ಲಿ ಘಟನೆ ನಡೆದಿದ್ದು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ನಿಜ ಎಂದಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ದರ್ಶನ್ ಫ್ಯಾನ್ಸ್ ದಂಡು; ಪೊಲೀಸರಿಂದ ಲಾಠಿ ಚಾರ್ಜ್
ಬೆಳಗ್ಗೆ 11ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭದಲ್ಲಿ ಕೃತ್ಯ ನಡೆದಿದ್ದು ದಕ್ಷಿಣ ಕನ್ನಡ ಮೂಲದ ಜಯೇಶ ಪೂಜಾರಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಜಯೇಶ ಪೂಜಾರಿ ಶಾಕೀರ್ ಮೊಹಮ್ಮದ್ ಆಗಿ ಮತಾಂತರವಾಗಿದ್ದಾನೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಗೆ ಒಳಗಾದ ಕೈದಿಯಾಗಿ ಇದ್ದಾನೆ ಎಂದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಗ್ರಾಮದ ಆರೋಪಿ 14ನೇ ವಯಸ್ಸಿನಲ್ಲೇ ಮನೆಬಿಟ್ಟು ಮುಂಬೈ ಸೇರಿ ಅಲ್ಲಿ ತನ್ನ ಹೆಸರನ್ನು ಬದಲಾವಣೆ ಮಾಡಿಕೊಳ್ಳುತ್ತಾನೆ. ಸದ್ಯ ಆರೋಪಿಯ ವಿರುದ್ಧ ಡಬಲ್ ಮರ್ಡರ್ ಕೇಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಎಡಿಜಿಪಿ ಅಶೋಕ್ ಕುಮಾರ್ ಫೋನ್ ಮೂಲಕ ಬೆದರಿಕೆ ಹಾಕಿರುವ ಕೇಸ್ಗಳಿವೆ ಎಂದರು.
ಪಾಕ್ ಪರ ಘೋಷಣೆ ಕೂಗಿದ ಸಂಬಂಧ ಕೇಸ್ ದಾಖಲು ಮಾಡುತ್ತೇವೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ವಿಚಾರಣೆ ಮಾಡುತ್ತೇವೆ. ದಕ್ಷಿಣ ಕನ್ನಡದ ಡಬಲ್ ಮರ್ಡರ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು ಕೆಲ ವರ್ಷಗಳಿಂದ ಹಿಂಡಲಗಾ ಜೈಲಿನಲ್ಲಿ ಇದ್ದಾನೆ ಎಂದು ತಿಳಿಸಿದರು.