ಹುಬ್ಬಳ್ಳಿ: ಸುಮಲತಾ ಅಂಬರೀಶ್ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರು ಬಹಳ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ದೇವೇಗೌಡರ ಮನೆತನದ ವಿರುದ್ಧ ಯಾರು ಸ್ಪರ್ಧೆ ಮಾಡಿದರು ಅವರನ್ನ ತುಳಿಯುವ ಕೆಲಸ ಮಾಡ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ ಸುಮಲತಾಗೆ ರಾಜಕಾರಣ ಬೇಕಾ ಎಂಬ ರೇವಣ್ಣ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಇದು ಪ್ರಜಾಪ್ರಭುತ್ವ ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಹಕ್ಕಿದೆ. ಅವರು ಸ್ಪರ್ಧೆ ಮಾಡುತ್ತಾರೆಂದು ಈ ರೀತಿ ಕೀಳು ಮಟ್ಟದ ಹೇಳಿಕೆ ನೀಡಬಾರದು. ಅವರು ಸ್ಪರ್ಧೆ ಮಾಡಿದರೆ ರೇವಣ್ಣ ಅವರಿಗೆ ಏನೂ ತೊಂದರೆ. ಈ ಮೊದಲು ದೇವೇಗೌಡರು ಮತ್ತು ಅವರ ಮಕ್ಕಳು ರಾಜಕಾರಣದಲ್ಲಿದ್ದರು. ಈಗ ಮೊಮ್ಮಕ್ಕಳು, ಅವರು ಸೊಸೆಯಂದಿರು ರಾಜಕೀಯಕ್ಕೆ ಬಂದಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ
ಹೆಣ್ಣುಮಕ್ಕಳ ಬಗ್ಗೆ ಈ ರೀತಿ ಒಬ್ಬ ರಾಜಕಾರಣಿ ಮಾತನಾಡುವುದು ಸರಿಯಲ್ಲ. ಅಂಬರೀಶ್ ಅವರ ಧರ್ಮಪತ್ನಿ ಬಗ್ಗೆ ಈ ರೀತಿ ತಳಮಟ್ಟದ ರಾಜಕಾರಣ ಮಾಡಬಾರದು. ರಾಮನಗರ, ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಗಳನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಜೆಡಿಎಸ್ ಅವರು ಹೊರಟಿದ್ದಾರೆ. ಮಹಿಳಾ ದಿನಾಚರಣೆ ದಿನದಂದೇ ಒಬ್ಬ ಮಹಿಳೆಯ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿದ್ದು ಖಂಡನೀಯ. ವಿಧವೆ ಎಂಬುದನ್ನು ನೋಡದೆ ಇಂತಹ ಪದಗಳನ್ನ ಬಳಸಿರುವುದು ಅವರ ಚಾರಿತ್ರ್ಯವನ್ನ ತೋರಿಸುತ್ತದೆ ಎಂದು ರೇವಣ್ಣ ವಿರುದ್ಧ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv