ಮುಂಬೈ: ಇದು ಇನ್ನೂ ಅರಂಭ, ಆದರೆ ನಾನು ರಾಜಕೀಯವನ್ನು ಬಿಡುವುದಿಲ್ಲ ಎಂದು ಬಾಲಿವುಡ್ ತಾರೆ ಮತ್ತು ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.
ಊರ್ಮಿಳಾ ಮಾತೋಂಡ್ಕರ್ ಈ ಬಾರಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಗೋಪಾಲ್ ಶೆಟ್ಟಿ ವಿರುದ್ಧ ಸ್ಪರ್ಧಿಸಿ, 4,52,226 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದಾರೆ.
ಈ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಊರ್ಮಿಳಾ “ನನಗೆ ಈ ಚುನಾವಣೆ ಬಹಳ ಮಹತ್ವವದದ್ದು ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಾನು ರಾಜಕೀಯದಲ್ಲಿ ಇನ್ನೂ ಮುಂದುವರೆಯುತ್ತೇನೆ. ನಾನು ನಿಮ್ಮ ಮುಂದೆ ಸೋತ ವ್ಯಕ್ತಿಯಂತೆ ನಿಂತಿಲ್ಲ. ಒಬ್ಬ ವ್ಯಕ್ತಿಗೆ ಅತ್ಮಸಾಕ್ಷಿ ಎಂಬುವುದು ಬಹಳ ಮುಖ್ಯ. ನಾನು ಈ ಚುನಾವಣೆಯಲ್ಲಿ ಘನತೆಯಿಂದ ಮತ್ತು ಸಮಗ್ರತೆಯಿಂದ ಕೆಲಸ ಮಾಡಿದ್ದೇನೆ ಅದು ನನಗೆ ಖುಷಿಯಿದೆ” ಎಂದು ತಿಳಿಸಿದರು.
ಈ ಚುನಾವಣೆ ನನಗೆ ಅದ್ಭುತ ಅನುಭವವನ್ನು ನೀಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಮಾಡಿದ ಕೆಲಸಗಳ ಮೇಲೆ ನನಗೆ ಹೆಮ್ಮೆ ಇದೆ. ಇದು ಇನ್ನೂ ಅರಂಭ ಇನ್ನೂ ಮಾಡುವ ಕೆಲಸ ತುಂಬ ಇದೆ ಅದಕ್ಕಾಗಿ ನಾನು ಸಿದ್ಧವಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ನಲ್ಲಿ ಹಾಕಿರುವ ಸಹಿಗಳು ಹೊಂದಾಣಿಕೆ ಬರುತ್ತಿಲ್ಲ ಎಂದು ಊರ್ಮಿಳಾ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ಕೇಳಿದಾಗ. ನಾನು ಗೋಪಾಲ್ ಶೆಟ್ಟಿ ಅವರ ಗೆಲುವಿಗೆ ಅಭಿನಂದನೆ ಹೇಳುತ್ತೇನೆ. ಆದರೆ ನಮಗೆ ಇವಿಎಂನಲ್ಲಿ ಕೆಲವು ಭಿನ್ನತೆಗಳು ಕಂಡುಬಂದಿವೆ. ಇದರ ಬಗ್ಗೆ ತನಿಖೆ ಮಾಡುವಂತೆ ಚುನಾವಣಾ ಅಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.